ಇ-ಕಾಮರ್ಸ್ನಿಂದ ಇ -ಗೌರ್ನೆನ್ಸ್ ಜಾರಿ ಸಾಧ್ಯ : ಅಬ್ದುಲ್ ಕಲಾಂ
ಬೆಂಗಳೂರು : ಇ - ವಾಣಿಜ್ಯ ಮತ್ತು ಇ- ವ್ಯಾಪಾರದ ಮೂಲಕ ಸರ್ಕಾರದ ಆಡಳಿತ ಮತ್ತು ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ. ಇದು ಇ - ಆಡಳಿತ (ಇ -ಗೌರ್ನೆನ್ಸ್)ಕ್ಕೂ ಇಂಬು ನೀಡುತ್ತದೆ ಎಂದು ಕೇಂದ್ರ ಸರಕಾರದ ಮಾಜಿ ವಿಜ್ಞಾನ ಸಲಹೆಗಾರ ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದ್ದಾರೆ.
ವೈಟ್ಫೀಲ್ಡ್ನಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಎರಡನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಘಟಿಕೋತ್ಸವ ಭಾಷಣ ಮಾಡುತ್ತಿದ್ದ ಅವರು, ಸೂಕ್ತ ಕಾನೂನು ಸಾಧನಗಳ ಮೂಲಕ ದೇಶದಲ್ಲಿ ಇಂಥ ಆಡಳಿತ ವ್ಯವಸ್ಥೆ ಜಾರಿಗೆ ತರಲು ಸಾಧ್ಯ ಎಂದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿರುವ ಭಾರತಕ್ಕೆ ಇ- ಆಡಳಿತದ ಮೂಲಕ ಪಾರದರ್ಶಕತೆ ತರುವುದು ಕಷ್ಟಸಾಧ್ಯವೇನಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಶಿಕ್ಷಣ, ಆರೋಗ್ಯ ಸೇರಿದಂತೆ ದೇಶದ ಹಿತದೃಷ್ಟಿಯಿಂದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಜ್ಞಾನಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.
ಭಾರತವು ಅತ್ಯುತ್ಕೃಷ್ಟ ನಾಗರಿಕತೆಯನ್ನು ಹೊಂದಿದೆ. ಸ್ವಾತಂತ್ರ್ಯಾನಂತರದ ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತನ್ನ ಸಾರ್ವಭೌಮತ್ವವನ್ನು ಗುರುತಿಸಿಕೊಂಡಿದೆ. ರಕ್ಷಣೆ, ಅಣ್ವಸ್ತ್ರ, ಕೃಷಿ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಾನು ಯಾರಿಗೂ ಕಡಿಮೆ ಇಲ್ಲ ಎಂದು ಸಾಬೀತು ಪಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ಇನ್ಪೋಸಿಸ್ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ, ಸಂಸ್ಥೆಯ ನಿರ್ದೇಶಕ ಸಡಗೋಪನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದ 112 ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
(ಪಿ.ಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ