ವಿಂಡ್ಸರ್ ಮ್ಯಾನರ್ ಹೊಟೆಲ್ ಜಾಗ ಖಾಲಿ ಮಾಡುವಂತೆ ನೋಟಿಸ್
ಬೆಂಗಳೂರು : ನಗರದ ಹೃದಯ ಭಾಗವಾದ ಚೌಡಯ್ಯ ರಸ್ತೆಯಲ್ಲಿರುವ 1.65 ಲಕ್ಷ ಚದರಡಿ ಭೂಮಿಯ ಬಾಡಿಗೆ ಎಷ್ಟಿರಬಹುದು? ನೀವು ಲಕ್ಷ ಅಥವಾ ಕೋಟಿಯ ಪ್ರಮಾಣದಲ್ಲಿ ಲೆಕ್ಕಾಹಾಕುತ್ತಿದ್ದೀರಿ ಅಲ್ಲವೇ? ಆದರೆ, ಇದೇ ರಸ್ತೆಯ ಇಷ್ಟೇ ವಿಸ್ತೀರ್ಣದ ಭೂಮಿಯಲ್ಲಿರುವ ವಿಂಡ್ಸರ್ ಮ್ಯಾನರ್ ಹೋಟೆಲ್ ನೀಡುತ್ತಿರುವ ಮಾಸಿಕ ಬಾಡಿಗೆ ಕೇವಲ 1,500 ರುಪಾಯಿ ಮಾತ್ರ.
ಇದು ಆಶ್ಚರ್ಯ ಎನಿಸಿದರು. ಕಟು ಸತ್ಯ. ಈ ವಹಿವಾಟಿನಲ್ಲಿ ಭಾರಿ ಅಕ್ರಮವೇ ನಡೆದಿದೆ. ಹೀಗಾಗೇ ಕೂಡಲೇ ಜಾಗ ಖಾಲಿ ಮಾಡುವಂತೆ ವಕ್ಫ್ ಮಂಡಳಿ ವಿಂಡ್ಸರ್ ಮ್ಯಾನರ್ ಹೋಟೆಲ್ ಆಡಳಿತಕ್ಕೆ ನೋಟಿಸ್ ನೀಡಿದೆ. ಈ ವಿಷಯವನ್ನು ರಾಜ್ಯ ಕಾರ್ಮಿಕ ಹಾಗೂ ವಕ್ಫ್ ಖಾತೆ ಸಚಿವ ಹಿಂಡಸಗೇರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತುತ ವಿಂಡ್ಸರ್ ಮ್ಯಾನರ್ ಹೋಟೆಲ್ ಅನ್ನು ಐ.ಟಿ.ಸಿ. ಸಂಸ್ಥೆ ನಡೆಸುತ್ತಿದೆ. ವಾಸ್ತವವಾಗಿ ಐ.ಟಿ.ಸಿ. ಮೂರನೇ ಗುತ್ತಿಗೆದಾರನಾಗಿದ್ದು, ಇದು ಕೂಡ ಅಕ್ರಮವೇ. ಅದಕ್ಕಾಗಿ ಈ ಸಂಸ್ಥೆಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಜಾಗವನ್ನು ಗುತ್ತಿಗೆ ನೀಡುವ ಎಲ್ಲ ಹಂತದಲ್ಲೂ ಅಕ್ರಮವೇ ತಾಂಡವವಾಡುತ್ತಿದೆ. 1971ರಲ್ಲಿ ಅಕಾಲಿ ಅಸ್ಕರ್ ಟ್ರಸ್ಟ್ ಮುತಾವಲಿ ಅವರು, ವಕ್ಫ್ ಮಂಡಳಿಯ ಪೂರ್ವಾನುಮತಿ ಪಡೆಯದೆಯೇ ಮನಾರ್ಕ್ ಕಾರ್ಪೊರೇಷನ್ ಸಂಸ್ಥೆಗೆ ವಿಂಡ್ಸರ್ ಮ್ಯಾನರ್ ಜಾಗೆಯನ್ನು 30 ವರ್ಷಗಳ ಸುದೀರ್ಘ ಅವಧಿಗೆ ಅಕ್ರಮವಾಗಿ ಗುತ್ತಿಗೆ ನೀಡಿದರು.
ಗುತ್ತಿಗೆ ಅವಧಿ ಮುಗಿಯದಿದ್ದರೂ ಕೂಡ ಮತ್ತೆ 1974ರಲ್ಲಿ ಮುತಾವಲಿ ಅವರು, ಮತ್ತೊಮ್ಮೆ ವಕ್ಫ್ ಮಂಡಳಿ ಅನುಮತಿ ಇಲ್ಲದೆ, ಗುತ್ತಿಗೆಯ ಅವಧಿಯನ್ನು ಇನ್ನೂ 20 ವರ್ಷಗಳ ಕಾಲ ಅಕ್ರಮವಾಗಿ ವಿಸ್ತರಿಸಿದರು.
1.65 ಲಕ್ಷ ಚದರಡಿಯ ಈ ಅಮೂಲ್ಯವಾದ ಜಾಗಕ್ಕೆ ಮಾಸಿಕ 1,500 ರು.ಗಳ ಲೀಸ್ ಎಂದು ನಿಗದಿಪಡಿಸಲಾಗಿದೆ. 1971ರಲ್ಲಿ ಮೊನಾರ್ಕ್ ಕಾರ್ಪೊರೇಷನ್ ಅಕ್ರಮವಾಗಿ ಪಡೆದ ಭೂಮಿಯನ್ನು, ನಂತರ ವಿಶ್ವಕರ್ಮ ಹೋಟೆಲ್ ಗುಂಪಿಗೆ ಮರುಗುತ್ತಿಗೆ ನೀಡಲಾಯಿತು. ಆನಂತರ ಮರುಗುತ್ತಿಗೆಯಲ್ಲಿ ಐ.ಟಿ.ಸಿ. ಗ್ರೂಪ್ ಪಡೆಯಿತು. ಇವೆಲ್ಲವೂ ಸ್ಪಷ ಅಕ್ರಮಗಳೇ ಎಂದು ಅವರು ಹೇಳಿದರು.
ಆರಂಭದಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗೆ ಸೇರಿದ್ದ ಈ ಅಮೂಲ್ಯ ಆಸ್ತಿ, ಅಫಾಲಿ ಆಸ್ಕರ್ ಟ್ರಸ್ಟ್ಗೆ ಸೇರಿದ ನಂತರ ವಕ್ಫ್ ಮಂಡಳಿಯ ಆಸ್ತಿಯಾಗಿ ಪರಿವರ್ತಿತವಾಯಿತು. ಆದರೆ, ಆಸ್ಕರ್ ಟ್ರಸ್ಟ್ನ ಮುತಾವಲಿ ಅವರು, ಗುತ್ತಿಗೆಯ ವಿಷಯಗಳನ್ನು ಸಿರಾಯಗಿ ಪರಿಶೀಲಿಸದೆ, ಈ ಭೂಮಿಯನ್ನು ಗುತ್ತಿಗೆ ನೀಡಿದರು ಎಂದು ಭೂಮಿಯ ಹಿನ್ನೆಲೆಯನ್ನು ಸಚಿವರು ವಿವರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...