ಭೀಕರ ಜೋಡಿ ಕೊಲೆಯ ವಿಕೃತ ಕಾಮಿ ಹಂತಕರ ಬಂಧನ
ಬೆಂಗಳೂರು : ನವೆಂಬರ್ 23ರಂದು ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತಾಯಿ -ಮಗನ ಜೋಡಿ ಕೊಲೆಯೂ ಸೇರಿದಂತೆ ನಾಲ್ಕು ಜನರನ್ನು ನಿರ್ದಯವಾಗಿ ಕೊಂದಿದ್ದ ಮೂರು ಮಂದಿ ಹಂತಕರ ತಂಡವನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಚೊಕ್ಕಸಂದ್ರದ ಸ್ಲಮ್ ನಿವಾಸಿ ಮುನಿರಾಜು (22), ಟಿ. ದಾಸರಹಳ್ಳಿಯ ನಟರಾಜ (22) ಮತ್ತು ದೊಡ್ಡಬಳ್ಳಾಪುರ ಬಳಿಯ ರಾಮಪುರದ ರಾಮಮೂರ್ತಿ ಅಲಿಯಾಸ್ ಉಪೇಂದ್ರ (26) ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬೆಂಗಳೂರು ಮಹಾನಗರವನ್ನು ತಲ್ಲಣಗೊಳಿಸಿದ್ದ ನಾಲ್ಕು ನಿಗೂಢ ಕೊಲೆ ಪ್ರಕರಣಗಳನ್ನು ಭೇದಿಸಿದ್ದಾರೆ. ಈ ವಿಷಯವನ್ನು ಗುರುವಾರ ಎಚ್.ಟಿ. ಸಾಂಗ್ಲಿಯಾನ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನವೆಂಬರ್ 23ರಂದು ಆರೋಪಿಗಳು ಬ್ಯಾಂಕ್ ನೌಕರ ಜಗದೀಶ್ ಎಂಬುವವರ ಪತ್ನಿ ಲಕ್ಷ್ಮೀದೇವಿ ಮತ್ತು ಅವರ 6 ವರ್ಷದ ಮಗ ಗೌತಮ್ನನ್ನು ಕೊಂದು, ನಗನಾಣ್ಯ ಅಪಹರಿಸಿದ್ದರು. ಶಾಲಾ ಬಾಲಕಿ ದೀಪಿಕಾ ಹಾಗೂ ಚೊಕ್ಕಸಂದ್ರ ನಿವಾಸಿ ಮಹದೇವನ್ ಹಾಗೂ ಕಳೆದ ವರ್ಷ ಜೂನ್ನಲ್ಲಿ ನಡೆದ ಸೋಲದೇವನಹಳ್ಳಿಯ ಕೃಷ್ಣಾರೆಡ್ಡಿ ಅವರ ಕೊಲೆಯನ್ನೂ ಈ ಆರೋಪಿಗಳೇ ಮಾಡಿದ್ದರು ಎಂದು ಅವರು ತಿಳಿಸಿದರು.
ವಿಕೃತ ಕಾಮಿ : ಈ ತಂಡದಲ್ಲಿ ಒಬ್ಬನಾದ ಮುನಿರಾಜ ಅಲಿಯಾಸ್ ಮುನಿಯ ವಿಕೃತ ಕಾಮಿಯಾಗಿದ್ದು, ನವೆಂಬರ್ 21ರಂದು ಒಂದನೇ ತರಗತಿಯಲ್ಲಿ ಓದುತ್ತಿದ್ದ ಶಾಲಾ ಬಾಲಕಿ ದೀಪಿಕಾಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನೆಂದು ಅವರು ತಿಳಿಸಿದರು.
ಇದೇ ತಂಡ 23ರಂದು ಕೇಬಲ್ ರಿಪೇರಿ ಮಾಡುವ ನೆಪದಲ್ಲಿ ಲಕ್ಷ್ಮೀದೇವಿ ಅವರ ಮನೆಗೆ ನುಗ್ಗಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಅವರ ಕುತ್ತಿಗೆ ಕೊಯ್ದು ಕೊಂದರು. ಇದನ್ನು ಕಣ್ಣಾರೆ ಕಂಡ ಆಕೆಯ ಪುತ್ರ ಗೌತಮ್ನನ್ನು ನೇಣುಹಾಕಿ ಹತ್ಯೆ ಮಾಡಿದರು ಎಂದು ಅವರು ವಿವರಿಸಿದರು.
ಈ ಜೋಡಿಕೊಲೆಯ ಸಂಚು ರೂಪಿಸಿದ್ದು, ಟಿ. ದಾಸರಹಳ್ಳಿಯಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡಿರುವ ರಾಮಮೂರ್ತಿ ಅಲಿಯಾಸ್ ರಾಮ. ಹತ್ಯೆಗೀಡಾದ ಶಾಲಾ ಬಾಲಕಿ ದೀಪಿಕಾಳ ಸೋದರಿ ಕುಮಾರಿ ಪೂಜಾ ನೀಡಿದ ಸುಳಿನ ಮೇರೆಗೆ ಹಾಗೂ ಆಕೆ ಗುರುತಿಸಿದ ಕಂಪ್ಯೂಟರ್ ಚಿತ್ರದ ಸಹಾಯದಿಂದ ಆರೋಪಿಗಳನ್ನು ತುಮಕೂರು ಬಳಿಯ ತೋವಿನಕೆರೆ ಮನೆಯಲ್ಲಿ ಬಂಧಿಸಲಾಯಿತು ಎಂದು ಅವರು ತಿಳಿಸಿದರು.
ಆರೋಪಿಗಳಿಂದ ಅಪಾರ ಪ್ರಮಾಣದ ಚಿನ್ನಾಭರಣ, ಬಣ್ಣದ ಟಿ.ವಿ. ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿ.ಸಿ.ಪಿ. ವೇಣುಗೋಪಾಲ್ ಹಾಗೂ ಎಸಿಪಿ ಪಾಂಡುರಂಗರಾವ್ ಮಾರ್ಗದರ್ಶನದಲ್ಲಿ ಪೀಣ್ಯ ಪೊಲೀಸ್ ಇನ್ಸ್ಪೆಕ್ಟರ್ ಅಬ್ದುಲ್ ಅಜೀಂ ನೇತೃತ್ವದ ತಂಡ ಮಾಡಿದ ಈ ಸಾಧನೆಗೆ 60 ಮತ್ತು 40 ಸಾವಿರ ರುಪಾಯಿಗಳ ನಗದು ಬಹುಮಾನವನ್ನು ಸಾಂಗ್ಲಿಯಾನ ಘೋಷಿಸಿದ್ದಾರೆ.
ಸಾಫ್ಟ್ವೇರ್ ದಂಪತಿ ಕೊಲೆ ಸುಳಿವು: ನವೆಂಬರ್ ತಿಂಗಳಿನಲ್ಲಿ ಗಿರಿನಗರ ಬಳಿ ನಡೆದ ಸಾಫ್ಟ್ವೇರ್ ದಂಪತಿಗಳಾದ ಪಂಚಗಟ್ಟಿ ಮತ್ತು ಅನು ಪಂಚಗಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಸುಳಿವುಗಳು ದೊರೆತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಸಾಂಗ್ಲಿಯಾನ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications