ತಾನ್ಸಿ ಭೂಹಗರಣ ಕಳಂಕದಿಂದ ಪಾರಾದ ಜಯಲಲಿತಾ
ಚೆನ್ನೈ: ತಮ್ಮ ರಾಜಕೀಯ ಜೀವನಕ್ಕೆ ಆತಂಕವಾಗಿ ಕಾಡುತ್ತಿದ್ದ ತಾನ್ಸಿ ಭೂಹಗರಣದಿಂದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾರಾಗಿದ್ದಾರೆ. ಪ್ರಕರಣದ ಬಗೆಗೆ ವಿಚಾರಣೆ ನಡೆಸಿದ ಮದ್ರಾಸ್ ಮುಖ್ಯ ನ್ಯಾಯಾಲಯ ಜಯಲಲಿತಾ ಅವರನ್ನು ಆರೋಪಮುಕ್ತಗೊಳಿಸಿದೆ.
ತಾನ್ಸಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ತೀರ್ಪು ನೀಡಿದ ನ್ಯಾಯಮೂರ್ತಿ ಎನ್. ದಿನಕರ್ ಅವರು ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿದರು. ತಾನ್ಸಿ ಮಾತ್ರವಲ್ಲದೆ ಜಯಲಲಿತಾ ಅವರ ಮೇಲಿದ್ದ ಪ್ಲೆಸೆಂಟ್ ಸ್ಟೇ ಹೊಟೇಲ್ ಪ್ರಕರಣವನ್ನೂ ನ್ಯಾಯಮೂರ್ತಿ ವಜಾ ಮಾಡಿದರು.
ತಮಿಳುನಾಡು ಸಣ್ಣ ಕೈಗಾರಿಕೆಗಳ ನಿಗಮ(ತಾನ್ಸಿ) ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ನಲ್ಲಿ ಜಯಲಲಿತಾ ಹಾಗೂ ಇತರ ಐವರನ್ನು ನ್ಯಾಯಾಲಯ ಅಪರಾಧಿಗಳೆಂದು ತೀರ್ಮಾನಿಸಿತ್ತು . ಮದ್ರಾಸ್ನ ಹೃದಯ ಭಾಗದಲ್ಲಿ ಅಕ್ರಮ ಭೂಮಿ ಖರೀದಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು .
ತಾನ್ಸಿ ಭೂ ಹಗರಣದ ಕಾರಣದಿಂದಾಗಿಯೇ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜಯಲಲಿತಾ ಅವರಿಗೆ ಅವಕಾಶ ನಿರಾಕರಿಸಲಾಗಿತ್ತು .
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...