ವಿದ್ಯುತ್ಗಾಗಿ ಗುಲ್ಬರ್ಗಾದಲ್ಲಿ ರೈತರ ಹೋರಾಟ : ಗಾಳಿಯಲ್ಲಿ ಗುಂಡು
ಗುಲ್ಬರ್ಗಾ : ತಮ್ಮ ಪಂಪ್ಸೆಟ್ಗಳಿಗೆ ಕನಿಷ್ಠ 12 ಗಂಟೆಗಳ ಕಾಲ ಸತತ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ, ಕಳೆದ 2-3 ದಿನದಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಚಳವಳಿ ಸೋಮವಾರ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಕನಿಷ್ಠ 7 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.
ತಮ್ಮ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಚಳವಳಿ ಒಂದು ಹಂತದವರೆಗೂ ಶಾಂತಿಯುತವಾಗಿತ್ತು. ಆದರೆ, ರೈತರ ಒಂದು ಗುಂಪು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ, ಒಳನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು.
ಈ ಹಂತದಲ್ಲಿ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಎದುರುಗಿರುವ ಕಟ್ಟಡದಿಂದ ರೈತರು ಕಲ್ಲುತೂರಾಟದಲ್ಲಿ ತೊಡಗಿದರು. ಹಿಂಸಾಚಾರಕ್ಕಿಳಿದ ರೈತರ ನಿಯಂತ್ರಣಕ್ಕೆ ಪೊಲೀಸರು ಲಾಠಿ ಪ್ರಹಾರ ನಡೆಸಿದರೂ ಪ್ರಯೋಜನವಾಗಲಿಲ್ಲ. ಆ ಹಂತದಲ್ಲಿ ಪೊಲೀಸರು 7 ಸುತ್ತು ಗಾಳಿಯಲ್ಲಿ ಗುಂಡುಹಾರಿಸಿದರು.
ಈ ಘಟನೆಯಲ್ಲಿ ಕನಿಷ್ಠ 14 ಪೊಲೀಸರು ಗಾಯಗೊಂಡಿದ್ದು, ಹಲವಾರು ರೈತರು ಗಾಯಗೊಂಡಿದ್ದಾರೆ. ಸಬ್ಇನ್ಸ್ಪೆಕ್ಟರ್ ಜೇಮ್ಸ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಹಲವು ಪೊಲೀಸ್ ವಾಹನಗಳು ಹಾನಿಗೊಳಗಾಗಿವೆ. ಈ ವಿಷಯವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಗುಲ್ಬರ್ಗದಾದ್ಯಂತ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರಾವರಿ ಪಂಪ್ಸೆಟ್ ಹಿತರಕ್ಷಣಾ ಸಮಿತಿ ಈ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...