ಎಂ.ಜಿ. ರಸ್ತೆಗೆ ಆಟದ ಮೈದಾನ ಆಗುವ ಯೋಗವೇ ಇಲ್ಲ
ಬೆಂಗಳೂರು : ಬೆಂಗಳೂರಿನ ಮಹಾತ್ಮಾ ಗಾಂಧೀ ರಸ್ತೆಯಲ್ಲಿ ನಿರ್ಭೀತಿಯಿಂದ ಆಟವಾಡುವ ಮಕ್ಕಳ ಕನಸು ನುಚ್ಚು ನೂರಾಗಿದೆ. ಕಳೆದ 15ದಿನಗಳಿಂದ ಡಿ.2ರ ಭಾನುವಾರ ಯಾವಾಗ ಬರುತ್ತದೋ, ನಾವು ಎಷ್ಟೊತ್ತಿಗೆ ಎಂ.ಜಿ. ರಸ್ತೆಯಲ್ಲಿ ಕ್ರಿಕೆಟ್ ಆಡುತ್ತೇವೋ ಎಂದು ಕಾದಿದ್ದ ಪುಟಾಣಿಗಳಿಗೆ ಭ್ರಮನಿರಸನವಾಗಿದೆ.
ಪ್ರತಿ ತಿಂಗಳ ಮೊದಲ ಭಾನುವಾರ ಮಕ್ಕಳಿಗೆ ಆಟವಾಡಲು ಎಂ.ಜಿ. ರಸ್ತೆಯನ್ನು ಮುಕ್ತಗೊಳಿಸುವ ಮತ್ತು ರಸ್ತೆ ಸಂಚಾರ ನಿಯಮಗಳ ಬಗ್ಗೆ ತಿಳಿಸಿ ಹೇಳಲು ಕಮಿಷನರ್ ಎಚ್.ಟಿ. ಸಾಂಗ್ಲಿಯಾನಾ ಅವರು ಹಮ್ಮಿಕೊಂಡಿದ್ದ ಯೋಜನೆ ರದ್ದಾಗಿದೆ.
ಮಹಾತ್ಮಾ ಗಾಂಧೀ ರಸ್ತೆ ಬದಲಿಗೆ ಸನಿಹದಲ್ಲೇ ಇರುವ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆ ಕಾರ್ಯಕ್ರಮ ನಡೆಸಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಜೊತೆ ಸಾಂಗ್ಲಿಯಾನಾ ಮಾತುಕತೆ ನಡೆಸಿದ್ದಾರೆ. ಈ ವಿಷಯವನ್ನು ಖುದ್ದು ಸಾಂಗ್ಲಿಯಾನಾ ಅವರೇ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ನೃಪತುಂಗ ರಸ್ತೆ : ಡಿ.1ರ ಶನಿವಾರದಿಂದ ನೃಪತುಂಗ ರಸ್ತೆಯನ್ನು ಮತ್ತೆ ದ್ವಿಮುಖ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರವನ್ನೂ ಅನಿರ್ದಿಷ್ಟಕಾಲ ಮುಂದೂಡಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಂಗ್ಲಿಯಾನ ತಿಳಿಸಿದ್ದಾರೆ.
ಸಾರ್ವಜನಿಕ ಅರ್ಜಿ ಇತ್ಯರ್ಥವಾಗುವ ಮೊದಲು ಪ್ರಾಯೋಗಿಕವಾಗಿ ಒಂದು ವಾರಕಾಲ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದ ಅವರು, ಏಕಮುಖ ಸಂಚಾರ ವ್ಯವಸ್ಥೆ ವಿರುದ್ಧ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ಪೈಕಿ ಒಂದು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ ಎಂದೂ ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications