ಸಮುದಾಯದ ಭಾಷೆ ಉಳಿಸಲು ನಾಟಕ ಅಗತ್ಯ-ಬಿ.ವಿ.ಕಾರಂತ
ಮೈಸೂರು : ನಾಟಕವನ್ನು ಪಠ್ಯದಲ್ಲಿ ಅಳವಡಿಸುವ ಬಗ್ಗೆ ಸರಕಾರ ಚಿಂತನೆ ನಡೆಸಬೇಕು ಎಂದು ಪ್ರಸಿದ್ಧ ರಂಗ ನಿರ್ದೇಶಕ ಬಿ.ವಿ. ಕಾರಂತ ಸಲಹೆ ಮಾಡಿದ್ದಾರೆ.
ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಹಮ್ಮಿ ಕೊಂಡಿರುವ ಅಕ್ಕ ರಾಷ್ಟ್ರೀಯ ಮಹಿಳಾ ನಾಟಕೋತ್ಸವದ ಉದ್ಘಾಟನಾ ಸಮಾರಂಭವದಲ್ಲಿ ಅವರು ಭಾನುವಾರ ಮಾತನಾಡುತ್ತಿದ್ದರು. ಜನಸಮುದಾಯದ ನಡುವೆ ಭಾಷೆ ಯನ್ನು ಉಳಿಸಿ ಬೆಳೆಸಲು ರಂಗಭೂಮಿ ಒಂದು ಒಳ್ಳೆಯ ಸಾಧನ. ಮನುಷ್ಯನಿಗೆ ಅರಿವನ್ನು ಮೂಡಿಸುವ ಮತ್ತು ಬೌದ್ಧಿಕ ವಿಕಾಸಕ್ಕೆ ಶ್ರಮಿಸುವ ನಿಕಟ ಮಾಧ್ಯಮ ನಾಟಕವಾಗಿದೆ. ಒಂದು ಸಮುದಾಯಕ್ಕೆ ಶಿಕ್ಷಣ ನೀಡಲು ಹೇಗೆ ಶಾಲೆಗಳು ಸಹಕಾರಿಯಾಗುತ್ತದೋ ಹಾಗೆಯೇ ಕಲಾ ಪ್ರಕಾರವನ್ನು ಅಭಿವೃದ್ಧಿಗೊಳಿಸಲು ರೆಫರ್ಟರಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕಾರಂತರು ಅಭಿಪ್ರಾಯಪಟ್ಟರು.
ನಾಟಕೋತ್ಸವವನ್ನು ಉದ್ಘಾಟಿಸಿದ ಪ್ರಖ್ಯಾತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿಂದಿ ಲೇಖಕಿ ಕೃಷ್ಣಾ ಸೋಬ್ತಿ ಅವರು ಮಾತನಾಡಿ ಸಮಾಜದಲ್ಲಿನ ಗಂಭೀರ ಸಮಸ್ಯೆಗಳನ್ನು ಬಿಂಬಿಸುವ ನಾಟಕಗಳಲ್ಲಿ ರಚನಾತ್ಮಕ ಸಂಯೋಜನೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ 12ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿದ ಅಕ್ಕಮಹಾದೇವಿಯ ಸಾಮಾಜಿಕ ಪರಿಕಲ್ಪನೆಯ ಒಂದಂಗವೇ ಈ ಮಹಿಳಾ ನಾಟಕೋತ್ಸವ ಎಂದು ಹೇಳಿದರು.
ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಭೂಮಿಗೀತ ರಂಗಮಂದಿರದಲ್ಲಿ , ಕೃಷ್ಣಾ ಸೋಬ್ತಿಯವರ ‘ಎ ಲಡ್ಕಿ’ ನಾಟಕದೊಂದಿಗೆ ಎಂಟು ದಿನಗಳ ರಾಷ್ಟ್ರೀಯ ನಾಟಕೋತ್ಸವ ಆರಂಭವಾಯಿತು. ಇದೇ ಸಂದರ್ಭದಲ್ಲಿ ಸಮಗ್ರ ರಂಗ ಮಂದಿರವನ್ನು ಸಚಿವೆ ರಾಣಿ ಸತೀಶ್ ನಾಡಿಗರ್ಪಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications