ಆಂಧ್ರದಲ್ಲಿ ಚಂಡಮಾರುತ : ಸತ್ತವರು-41,ಕಾಣೆಯಾದವರು-200
ಹೈದರಾಬಾದ್ : ಮಂಗಳವಾರ ನೆಲ್ಲೂರಿನಲ್ಲಿ ಎದ್ದಿರುವ ಭಾರೀ ಚಂಡಮಾರುತ 41 ಜನರನ್ನು ನುಂಗಿಕೊಂಡಿದ್ದು, 200 ಜನರು ನಾಪತ್ತೆಯಾಗಿದ್ದಾರೆ ಎಂದು ಉನ್ನತ ಮೂಲಗಳು ಬುಧವಾರ ದೃಢಪಡಿಸಿವೆ.
ಕರ್ನೂಲು ಜಿಲ್ಲೆಯ ಸುದ್ದಮಿತ್ತ ಗ್ರಾಮದ ದೇವಸ್ಥಾನವೊಂದರಲ್ಲಿ ತಂಗಿದ್ದ 15 ಜನ ಎಗ್ಗಿಲ್ಲದೆ ನುಗ್ಗಿದ ನೀರು ಪಾಲಾಗಿದ್ದಾರೆ. ಕಡಪ ಪಟ್ಟಣದ ಅರ್ಧ ಭಾಗ ಜಲಾವೃತವಾಗಿದ್ದು, ಇಲ್ಲಿನ 18 ಜನ ಮೃತಪಟ್ಟಿದ್ದು, 150 ಮಂದಿ ಕಾಣೆಯಾಗಿದ್ದಾರೆ. ನೆಲ್ಲೂರಿನಲ್ಲಿ ಐದು ವಿದ್ಯಾರ್ಥಿಗಳೂ ಸೇರಿದಂತೆ 6 ಮಂದಿ ಹಾಗೂ ಚಿತ್ತೂರಿನಲ್ಲಿ ಇಬ್ಬರು ಸತ್ತಿದ್ದಾರೆ.
ಬುಗ್ಗವಂಕ ಅಣೆಕಟ್ಟೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಕಡಪ ಪಟ್ಟಣಕ್ಕೆ ದೊಡ್ಡ ಹೊಡೆತ ಬೀಳುವ ಆತಂಕವಿದೆ. ಜಲಾವೃತ ಪ್ರದೇಶದಲ್ಲಿನ ಜನರಿಗೆ ಬುಧವಾರ ಸಂಜೆ ಹೊತ್ತಿಗೆ ಆಹಾರದ ಪೊಟ್ಟಣಗಳನ್ನು ಪೂರೈಸುವುದಾಗಿ ಸರ್ಕಾರ ಹೇಳಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಂಡಮಾರುತದ ಹೊಡೆತ ತಿಂದ ಪ್ರದೇಶಗಳನ್ನು ವಿಮಾನ ಯಾನದ ಮೂಲಕ ವೀಕ್ಷಿಸಿದ್ದಾರೆ.
ಆಂಧ್ರಪ್ರದೇಶದ ಸಾಕಷ್ಟು ಕಡೆ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 5ರಲ್ಲೂ ಸಂಚಾರ ಅಸ್ತವ್ಯಸ್ತವಾಗಿದೆ. ನೆಲ್ಲೂರು ವಲಯದಲ್ಲಿ ರೈಲು ಸಂಚಾರಕ್ಕೂ ತೊಂದರೆಯಾಗುತ್ತಿದೆ. ವಿಜಯವಾಡ- ಚೆನ್ನೈ ಇಂಟರ್ ಸಿಟಿ ಪಿನಕಿಣಿ ಎಕ್ಸ್ಪ್ರೆಸ್ ಹಾಗೂ ಸಿಕಂದರಾಬಾದ್- ತಿರುಪತಿ ಕೃಷ್ಣಾ ಎಕ್ಸ್ಪ್ರೆಸ್ ಗುಂಟೂರಿನಲ್ಲೇ ನಿಂತು ಹೋಗಿವೆ. ಗುವಾಹಟಿ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಗುದೂರಿನಲ್ಲಿ ನಿಲ್ಲಿಸಲಾಗಿದೆ.
(ಏಜೆನ್ಸೀಸ್)