ಜೊತೆಯಾಗಿ ನಡೆಯೋಣ !
ನವದೆಹಲಿ : ಸೆಪ್ಟಂಬರ್ 11 ರಂದು ಅಮೆರಿಕೆಯಲ್ಲಿ ನಡೆದ ಭಯೋತ್ಪಾದಕ ಕೃತ್ಯವಾಗಲೀ ಅಥವಾ ಅಕ್ಟೋಬರ್ 1 ರಂದು ಶ್ರೀನಗರದಲ್ಲಿ ನಡೆದ ಮಾರಣ ಹೋಮವಾಗಲೀ- ಅಮೆರಿಕ ಎರಡನ್ನೂ ಒಂದೇ ದೃಷ್ಟಿಯಲ್ಲಿ ನೋಡುತ್ತದೆ. ಭಯೋತ್ಪಾದಕತೆಯನ್ನು ದಮನ ಮಾಡಲು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಹಾಗೂ ಭಾರತ ಭುಜಕ್ಕೆ ಭುಜ ಆನಿಸಿ ಹೋರಾಡುತ್ತವೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಕಾಲಿನ್ ಪೊವೆಲ್ ಬುಧವಾರ ಘೋಷಿಸಿದರು.
ಅಂತರರಾಷ್ಟ್ರೀಯ ಭಯೋತ್ಪಾದಕತೆಯ ವಿರುದ್ಧ ಅಮೆರಿಕ ನಡೆಸುತ್ತಿರುವ ಹೋರಾಟದ ಅಜೆಂಡಾದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದಕತೆಯೂ ಸೇರಿದೆ ಎಂದು ಭಾರತದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರೊಂದಿಗೆ ಕಿಕ್ಕಿರಿದ ಜಂಟಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪೊವೆಲ್ ಕಾಶ್ಮೀರ ವಿಷಯವನ್ನು ನೇರವಾಗಿ ಪ್ರಸ್ತಾಪಿಸದೆಯೇ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸಲು ವಾಜಪೇಯಿ ನವಂಬರ್ನಲ್ಲಿ ವಾಷಿಂಗ್ಟನ್ ತೆರಳಲಿದ್ದು , ನವಂಬರ್ 9 ರಂದು ವಾಷಿಂಗ್ಟನ್ಗೆ ಬರುವಂತೆ ಅಮೆರಿಕಾದ ಅಧ್ಯಕ್ಷ ಬುಷ್ ಅವರು ನೀಡಿರುವ ಆಹ್ವಾನವನ್ನು ವಾಜಪೇಯಿ ಒಪ್ಪಿಕೊಂಡಿದ್ದಾರೆ ಎಂದೂ ಪೊವೆಲ್ ಹೇಳಿದರು.
ಕಾಶ್ಮೀರವೇ ಭಾರತ-ಪಾಕ್ ನಡುವೆ ಪ್ರಮುಖ ವಿಷಯ
ಭಾರತ ಹಾಗೂ ಪಾಕಿಸ್ತಾನ ನಡುವಿನ ಮಾತುಕತೆಯಲ್ಲಿ ಕಾಶ್ಮೀರ ವಿವಾದವೇ ಕೇಂದ್ರಬಿಂದು ಎನ್ನುವ ಅಮೆರಿಕಾದ ನಿಲುವನ್ನು ಪೊವೆಲ್ ಪುನರುಚ್ಚರಿಸಿದರು. ಭಾರತ ಹಾಗೂ ಪಾಕಿಸ್ತಾನ ಎರಡೂ ಅಮೆರಿಕಾದ ಮಿತ್ರರಾಷ್ಟ್ರಗಳಾಗಿದ್ದು, ಕಾಶ್ಮೀರದ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಅಮೆರಿಕ ಬಯಸುತ್ತದೆ ಎಂದು ಪೊವೆಲ್ ಹೇಳಿದರು.
ನಮ್ಮ ಗುರಿ ಸಾಧಸಿಯೇ ತೀರುತ್ತೇವೆ
ಅಂತರರಾಷ್ಟ್ರೀಯ ಸಹಕಾರದೊಂದಿಗೆ ಭಯೋತ್ಪಾದಕತೆಯ ವಿರುದ್ಧ ಹೋರಾಡುತ್ತಿರುವ ಅಮೆರಿಕ , ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್ ಲ್ಯಾಡೆನ್ ಸಂಘಟಿಸಿರುವ ಆಲ್-ಕ್ವೆ ೖದಾ ಸಂಘಟನೆಯ ಜಾಲವನ್ನು ಸಂಪೂರ್ಣ ನಾಶಗೊಳಿಸುವ ಉದ್ದೇಶವನ್ನು ಹೊಂದಿದೆ. ಆಪ್ಘಾನಿಸ್ತಾನ ಇನ್ನೆಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರಲು ಅಥವಾ ಭಯೋತ್ಪಾದಕರ ಸ್ವರ್ಗವಾಗಿರಲು ಸಾಧ್ಯವಿಲ್ಲ ಎಂದು ಪೊವೆಲ್ ಹೇಳಿದರು.
ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ. ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಅಂತರರಾಷ್ಟ್ರೀಯ ಸಮುದಾಯ ಸಾರಿರುವ ಈ ಜಾಗತಿಕ ಆಂದೋಲನದಲ್ಲಿ ಯಶಸ್ವಿಯಾಗುತ್ತದೆ ಎಂದು ಪೊವೆಲ್ ವಿಶ್ವಾಸ ವ್ಯಕ್ತಪಡಿಸಿದರು.
ಭಯೋತ್ಪಾದಕತೆಯನ್ನು ಭಾರತ ಎಂದೂ ಒಪ್ಪಿಲ್ಲ
ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಸ್ವಂತ್ ಸಿಂಗ್ ಅವರು, ಸೆಪ್ಟಂಬರ್ 11 ರಂದು ಅಮೆರಿಕಾದ ಮೇಲೆ ನಡೆದ ದಾಳಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ನಾಗರೀಕತೆಯನ್ನು ನಾಶಗೊಳಿಸುವ ಕ್ರಮ ಎಂದು ಬಣ್ಣಿಸಿದರು. ಭಯೋತ್ಪಾದಕತೆಯ ವಿರುದ್ಧ ಅಮೆರಿಕಾ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕೈ ಜೋಡಿಸಲು ಭಾರತ ಸಿದ್ಧವಾಗಿದೆ ಎಂದು ಸಿಂಗ್ ಹೇಳಿದರು.
(ಪಿಟಿಐ)