ತೆಹಲ್ಕಾ ವಿರುದ್ಧ ಶ್ರೀನಿವಾಸಪ್ರಸಾದ್ರಿಂದ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು : ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ಸೋಮವಾರ ತೆಹೆಲ್ಕಾ.ಕಾಂ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ವಿವಾದಾತ್ಮಕ ರಕ್ಷಣಾ ಸಾಮಗ್ರಿ ಖರೀದಿ ಹಗರಣದಲ್ಲಿ ಅನವಶ್ಯಕವಾಗಿ ತಮ್ಮ ಹೆಸರನ್ನು ಎಳೆದಿರುವ ಡಾಟ್ಕಾಂ ಮಾನನಷ್ಟ ಉಂಟುಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಇಲ್ಲಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಿನಾಕಾರಣ ತಮ್ಮ ಹೆಸರನ್ನು ಈ ಹಗರಣದಲ್ಲಿ ಎಳೆದು, ತಮ್ಮ ತೇಜೋವಧೆ ಮಾಡಲಾಗಿದೆ ಎಂದಿರುವ ಅವರು, ತೆಹಲ್ಕಾ.ಕಾಂನ ಕಾರ್ಯನಿರ್ವಾಹಕ ಸಂಪಾದಕ ತರುಣ್ ಜೆ. ತೇಜ್ಪಾಲ್, ಅನಿರುದ್ಧ ಬಹಾಲ್, ಮಿಂಟಿ ಕುನ್ವರ್ ತೇಜ್ಪಾಲ್ ಹಾಗೂ ವರದಿಗಾರ ಮ್ಯಾಥ್ಯು ಸ್ಯಾಮ್ಯುಯಲ್ ಅವರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.
ಈ ಮೊಕದ್ದಮೆಯನ್ನು ದಾಖಲಿಸಿಕೊಂಡ ನ್ಯಾಯಾಧೀಶರಾದ ನ್ಯಾಯಮೂರ್ತಿ ರವೀಂದ್ರ ಜೆ. ವೈದ್ಯ ಅವರು, ಸೋಮವಾರ ಮಧ್ಯಾಹ್ನ ನ್ಯಾಯಾಲಯದಲ್ಲಿ ಹಾಜರಾಗಿ ಖುದ್ದು ಹೇಳಿಕೆ ನೀಡುವಂತೆ ಶ್ರೀನಿವಾಸ ಪ್ರಸಾದ್ ಅವರಿಗೆ ಸೂಚಿಸಿದರು.
ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ ಪ್ರಸಾದ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಸದ್ಯಕ್ಕೆ ಮೊಕದ್ದಮೆಯನ್ನಷ್ಟೇ ದಾಖಲಿಸಲಾಗಿದೆ. ಎಷ್ಟು ಪರಿಹಾರ ಕೇಳಬೇಕು ಎಂಬುದನ್ನು ತಮ್ಮ ವಕೀಲರಾದ ಎಂ.ಎನ್. ನೆಹರು ಹಾಗೂ ಕೆ. ದಿವಾಕರ್ ಅವರು ನಿರ್ಧರಿಸುವರು ಎಂದರು.
ಹಗರಣ ಬಯಲಾದ ಸಂದರ್ಭದಲ್ಲಿ ತಾವು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಮೊಕದ್ದಮೆಯನ್ನು ಬೆಂಗಳೂರು ನ್ಯಾಯಾಲಯದಲ್ಲೇ ಹೂಡಲಾಗಿದೆ. ಅನಾವಶ್ಯಕವಾಗಿ ಈ ಹಗರಣದಲ್ಲಿ ತಮ್ಮ ಹೆಸರನ್ನು ತಂದ ಡಾಟ್ ಕಾಂಗೆ ಕಾನೂನಿನ ರೀತ್ಯ ನೊಟಿಸ್ ನೀಡಿದ್ದರೂ ಅದು ಕ್ಷಮಾಪಣೆ ಕೋರದ ಕಾರಣ 6 ತಿಂಗಳ ತರುವಾಯ ಮೊಕದ್ದಮೆ ಹೂಡಲಾಯಿತು ಎಂದು ಸಮತಾ ಪಕ್ಷದ ನಾಯಕ ಶ್ರೀನಿವಾಸ ಪ್ರಸಾದ್ ವಿವರಿಸಿದರು.
ಮುಖಪುಟ / ಇವತ್ತು... ಈ ಹೊತ್ತು...