ಉತ್ತರ ಕರ್ನಾಟಕಕ್ಕೆ ಬರದೊಂದಿಗೆ ಭಾರವಾಗಿರುವ ಸೋನಿಯಾ ಭೇಟಿ
ಬೆಂಗಳೂರು : ಬರದ ಬೇಗೆಯಲ್ಲಿ ಬೇಯುತ್ತಿರುವ ಉತ್ತರ ಕರ್ನಾಟಕ ತನ್ನ ನೋವನ್ನು ಅದುಮಿಕೊಂಡು ಸೋನಿಯಾ ಸ್ವಾಗತಕ್ಕೆ ಸಜ್ಜಾಗಿದೆ. ಸಾಲದ ಶೂಲಕ್ಕೆ ಸಿಕ್ಕಿದ ರೈತರ ಆತ್ಮಹತ್ಯೆ ಪ್ರಕರಣಗಳ ನಡುವೆಯೂ ಸೋನಿಯಾ ಅವರ ಬೆಳ್ಳಿಯ ತುಲಾಭಾರ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.
ಸೆಪ್ಟಂಬರ್ 10 ರ ಬೆಳಗ್ಗೆ ಮುಂಬಯಿ ಮೂಲಕ ಬೆಳಗಾವಿಗೆ ಆಗಮಿಸುವ ಸೋನಿಯಾ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ಕೊಡಲಿದ್ದಾರೆ. ಸೋನಿಯಾ ಭೇಟಿ ಸಮಯದಲ್ಲಿ ಯಾವುದೇ ತೊಂದರೆ ಉಂಟಾಗದಿರಲೆಂದು ರಾಜ್ಯ ಸರ್ಕಾರ ಭರದಿಂದ ಸಿದ್ಧತೆಗಳನ್ನು ನಡೆಸಿದೆ.
ಜಮಖಂಡಿ ಸಕ್ಕರೆ ಕಾರ್ಖಾನೆಗೆ ಚಾಲನೆ
ದೇಶದ ಮೊಟ್ಟ ಮೊದಲ ರೈತರ ಸಹಕಾರ ಸಂಘದ ಜಮಖಂಡಿ ಸಕ್ಕರೆ ಕಾರ್ಖಾನೆಯನ್ನು ಸೋನಿಯಾಗಾಂಧಿ ಸೆಪ್ಟಂಬರ್ 10 ರ ಸೋಮವಾರ ಹಿರೇಪಡಸಲಗಿಯಲ್ಲಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಸೋನಿಯಾ ಅವರಿಗೆ ಬೆಳ್ಳಿಯ ನಾಣ್ಯಗಳ ತುಲಾಭಾರ ನಡೆಯಲಿದೆ. ಬೃಹತ್ ರೈತರ ಸಮಾವೇಶವೂ ಏರ್ಪಾಡಾಗಿದ್ದು ಸೋನಿಯಾ ರೈತರನ್ನುದ್ದೇಶಿಸಿ ಮಾತನಾಡುವರು.
ಮುಖ್ಯಮಂತ್ರಿ ಕೃಷ್ಣ, ಕೆಪಿಸಿಸಿಐ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಸೇರಿದಂತೆ ಸಂಪುಟದ ಬಹುತೇಕ ಸದಸ್ಯರು ಈ ಕಾರ್ಯಕ್ರಮದ್ಲಲಿ ಹಾಜರಿರುವರು. ಸೋನಿಯಾ ಭೇಟಿ ಯಶಸ್ಸಿಗಾಗಿ ಅಲ್ಲಂ ವೀರಭದ್ರಪ್ಪ, ಹಾಗೂ ಸಚಿವರಾದ ಡಿ.ಕೆ.ಶಿವ ಕುಮಾರ್ ಮತ್ತು ಸಗೀರ್ ಅಹ್ಮದ್ ಟೊಂಕ ಕಟ್ಟಿ ನಿಂತಿದ್ದಾರೆ.
ಭಾನುವಾರದಿಂದ ಮುಖ್ಯಮಂತ್ರಿಗಳ ಉತ್ತರ ಕರ್ನಾಟಕ ಪ್ರವಾಸ
ಹಾವೇರಿಯಿಂದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರನ್ನು ಬರ ಮಾಡಿಕೊಳ್ಳುವರು. ಅಲ್ಲಿಂದ ಸೋನಿಯಾ ಜೊತೆಗೂಡಿ ಬಿಜಾಪುರ ಹಾಗೂ ಬಾಗಲಕೋಟೆಯ ಬರಗಾಲಪೀಡಿತ ಪ್ರದೇಶಗಳಿಗೆ ಕೃಷ್ಣ ಭೇಟಿ ಕೊಡಲಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...