ಸೆ.6ರಂದು ಕನ್ನಡ ನಿಘಂಟು ಕರ್ತೃ ರೆ.ಫಾ. ಕಿಟಲ್ ಪ್ರತಿಮೆ ಅನಾವರಣ
ಬೆಂಗಳೂರು : ಎಂ.ಜಿ.ರಸ್ತೆ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಗಳು ಕೂಡುವ ಸ್ಥಳದಲ್ಲಿ (ಮೇಯೋಹಾಲ್ ಬಳಿ) ಇರುವ ಉದ್ಯಾನವನದಲ್ಲಿ ಸೆಪ್ಟೆಂಬರ್ 6ರಂದು ಕಿಟಲ್ ಅವರ ಪ್ರತಿಮೆಯ ಅನಾವರಣ ಕಾರ್ಯಕ್ರಮ ನಡೆಯಲಿದೆ.
ಮಹಾಪೌರರಾದ ಪ್ರೇಮಾ ಕಾರಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಅಂದು ಬೆಳಗ್ಗೆ 10.30ಕ್ಕೆ ರೆ. ಎಫ್.ಕಿಟಲ್ ಅವರ ಪ್ರತಿಮೆಯನ್ನು ಅನಾವಣ ಮಾಡಲಿದ್ದಾರೆ.
ಅಂದು ಸಂಜೆ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕಿಟಲ್ ಅವರ ಕೃತಿಗಳ ಕುರಿತು ವಿಚಾರ ಸಂಕಿರಣವೂ ನಡೆಯಲಿದೆ. ಸಂಜೆಯ ಸಮಾರಂಭದಲ್ಲಿ ಕನ್ನಡ ಭಾಷಾ ತಜ್ಞರಾದ ಡಾ. ಜಿ. ವೆಂಕಟಸುಬ್ಬಯ್ಯ, ಎನ್. ಬಸವಾರಾಧ್ಯ, ಡಾ. ಯು.ಪಿ. ಉಪಾಧ್ಯಾಯ ಹಾಗೂ ಡಾ. ವೆಂಕಟಾಚಲ ಶಾಸ್ತ್ರೀ ಅವರನ್ನು ಸನ್ಮಾನಿಸಲಾಗುತ್ತದೆ.
ಕಿಟಲ್ ಅವರ ಬಗ್ಗೆ : 1832ರಲ್ಲಿ ಜರ್ಮನಿಯಲ್ಲಿ ಜನಿಸಿ, 1853ರಲ್ಲಿ ಭಾರತಕ್ಕೆ ಪಾದ್ರಿಯಾಗಿ ಆಗಮಿಸಿದ ರೆವರೆಂಡ್ ಫಾದರ್ ಕಿಟಲ್ ಕನ್ನಡವನ್ನು ಕಲಿತು, 1893ರಲ್ಲಿ ಕನ್ನಡ ನಿಘಂಟನ್ನೇ ಪ್ರಕಟಿಸಿದರು. ಕನ್ನಡ ವ್ಯಾಕರಣ, ನಾಗವರ್ಮನ ಕನ್ನಡ ಛಂದಸ್ಸು, ಪಂಚತಂತ್ರ ಮೊದಲಾದ ಕೃತಿಗಳನ್ನೂ ಅವರು ಕನ್ನಡಕ್ಕೆ ನೀಡಿದರು.
ಕನ್ನಡ- ಸಂಸ್ಕೃತ ಪದಗಳಿಗೆ ಸವಿಸ್ತಾರ ಅರ್ಥವನ್ನು ನೀಡುವ ಅತ್ಯುತ್ತಮವಾದ ಈ ನಿಘಂಟು, ಕಿಟಲ್ ಅವರ 16 ವರ್ಷಗಳ ಅವಿರತ ಪರಿಶ್ರಮದ ಫಲವಾಗಿ ರೂಪುಗೊಂಡಿತು. ಮಂಗಳೂರಿನ ಬಾಸೆಲ್ ಮಿಷನ್ ಕಿಟಲ್ ನಿಘಂಟನ್ನು ಪ್ರಕಟಿಸಿತ್ತು.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...