ಬೆಂಗಳೂರು : ಗೌರಿ - ಗಣಪನ ವಿಸರ್ಜನೆಗೆ ಐದು ಕೆರೆಗಳ ನಿಗದಿ
ಬೆಂಗಳೂರು : ಪ್ರತಿವರ್ಷವೂ ಚಿಕ್ಕಕೆರೆಯಲ್ಲಿ ಬಿದ್ದು ದೊಡ್ಡ ಕೆರೆಯಲ್ಲಿ ಎದ್ದು ಬರುವ ಗಣಪ ಈ ವರ್ಷವೂ ಬಂದಿಹ. ಮನೆ ಮನೆಯನ್ನೂ ಅಲಂಕರಿಸಿಹ. ಪೂಜೆಯನ್ನು ಸ್ವೀಕರಿಸುತ್ತಿಹ. ಬೆಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿ ಗಣಪನ ವಿಸರ್ಜನೆಯದೇ ದೊಡ್ಡ ಸಮಸ್ಯೆ.
ಹೀಗಾಗೇ ಬೆಂಗಳೂರು ಮಹಾನಗರ ಪಾಲಿಕೆ ಗಣಪನ ವಿಸರ್ಜನೆಗೆಂದು ಐದು ಕೆರೆಗಳನ್ನು ನಿಗದಿ ಮಾಡಿದೆ. ಸ್ಯಾಂಕಿ ಕೆರೆ, ಅಲಸೂರು ಕೆರೆ, ಲಾಲ್ಬಾಗ್ ಕೆರೆ, ಮಡಿವಾಳ ಕೆರೆ ಹಾಗೂ ಯಡಿಯೂರು ಕೆರೆಯಲ್ಲಿ ನೀವು ಗಣಪನನ್ನು ಹಾಗೂ ಗೌರಮ್ಮನನ್ನು ವಿಸರ್ಜಿಸಬಹುದು.
ನೆನಪಿರಲಿ ಕೇವಲ ಮಣ್ಣಿನ ವಿಗ್ರಹಗಳನ್ನು ಮಾತ್ರ ಈ ಕೆರೆಯಲ್ಲಿ ವಿಸರ್ಜಿಸಬೇಕು. ಹೂವು, ಬಾಳೆಕಂದು, ಮಾವಿನ ಸೊಪ್ಪು ಇತ್ಯಾದಿ ಇತ್ಯಾದಿ ಪೂಜಾವಸ್ತುಗಳನ್ನು ಕೆರೆಗೆ ಹಾಕಬೇಡಿ. ಕೆರೆಯ ಬಳಿ ನಗರ ಪಾಲಿಕೆ ವಿಶೇಷವಾಗಿ ವ್ಯವಸ್ಥೆ ಮಾಡಿರುವ ಕಸದ ತೊಟ್ಟಿಯಲ್ಲೇ ಹಾಕಿ.
2200 ಟನ್ ಕಸದ ರಾಶಿ : ಪ್ರತಿನಿತ್ಯ ಬೆಂಗಳೂರಿನಲ್ಲಿ ಸುಮಾರು 2200 ಟನ್ ಕಸ ಶೇಖರವಾಗುತ್ತದೆ. ಇದರ ಜತೆ ಗಣಪನ ಹಬ್ಬದ ಸಂದರ್ಭದಲ್ಲಿ ಕನಿಷ್ಠ ಹೆಚ್ಚುವರಿಯಾಗಿ 500 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎನ್ನುತ್ತದೆ ಪಾಲಿಕೆಯ ಅಂಕಿಅಂಶ.
ಸೀಸದ ಭೀತಿ : ಬಣ್ಣ ಬಣ್ಣದ ಗಣಪನ ತಯಾರಿಸಲು ಬಳಸುವ ಸಿಂಥೆಟಿಕ್ ಬಣ್ಣಗಳನ್ನು ಅತಿಭಾರ ತ್ಯಾಜ್ಯ ಎಂದು ಗುರುತಿಸಲಾಗಿದ್ದು, ಇದು ಕೆರೆಯಲ್ಲಿರುವ ಜಲಚರಗಳಿಗೆ ಅಪಾಯ ಉಂಟು ಮಾಡುವ ಭೀತಿಯೂ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಕೊನೆ ಮಾತು : ಬಕಾಸುರನ ಹೊಟ್ಟೆಗೆ 6 ಕಾಸಿನ ಮಜ್ಜಿಗೆ ಎನ್ನುವ ಗಾದೆಯಂತೆ ಬೆಂಗಳೂರಿನ ಲಕ್ಷಾಂತರ ಗಣಪನ ಬಿಡಲು 5 ಕೆರೆ ಸಾಕೇ? ಇದ್ದೇ ಇದೆಯಲ್ಲ ಹಳೆ ಪದ್ಧತಿ ಅದಕ್ಕೇ ಶರಣಾಗಿ. ಪುಟ್ಟ ಗಣಪನ ತಂದು ಪೂಜಿಸಿ, ಒಂದು ಬಕೆಟ್ ತುಂಬಾ ನೀರು ಹಾಕಿ ವಿಸರ್ಜನೆ ಕಾರ್ಯ ನೆರವೇರಿಸಿ, 3 - 4 ದಿನ ಬಿಟ್ಟು ಗಿಡಕ್ಕೆ ಹಾಕಿದರಾಯಿತು.