ಬರ ಪರಿಹಾರ ಕಾಮಗಾರಿಚುರುಕು :‘ಕೂಲಿಗಾಗಿ ಕಾಳು’ ಜಾರಿ
ಬೆಂಗಳೂರು : ರಾಜ್ಯದ ಬರ ಪರಿಹರಿಸುವ ನಿಟ್ಟಿನಲ್ಲಿ ಬರುವ ಸೋಮವಾರದಿಂದಲೇ ‘ಕೂಲಿಗಾಗಿ ಕಾಳು’ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆ ಶುಕ್ರವಾರ ನಿರ್ಧರಿಸಿತು.
ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಆಡಳಿತ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತಿತರ ಅಧಿಕಾರಿಗಳೊಡನೆ ಸಭೆ ನಡೆಸಿ, ಪರಿಹಾರ ಕಾಮಗಾರಿಗಳನ್ನು ಕ್ಷಿಪ್ರ ಗತಿಯಲ್ಲಿ ಕೈಗೊಳ್ಳಬೇಕು ಎಂದು ಸಚಿವ ಸಂಪುಟ ಸಭೆ ತೀರ್ಮಾನಿಸಿತು.
ಕೇಂದ್ರ ಸರ್ಕಾರದಿಂದ ಆಹಾರ ಧಾನ್ಯಗಳು ಸೋಮವಾರ ಬಿಡುಗಡೆಯಾಗಲಿದ್ದು, ಖುದ್ದು ಮುಖ್ಯಮಂತ್ರಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಇದನ್ನು ಪರಿಶೀಲಿಸಲಿದ್ದಾರೆ. ರಾಜ್ಯದ 145 ಬರಪೀಡಿತ ತಾಲ್ಲೂಕುಗಳಿಗೆ ಕೇಂದ್ರ ಬಿಡುಗಡೆ ಮಾಡುವ ಧಾನ್ಯ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಹೋಂ ವರ್ಕ್ ಮಾಡಿದ ನಂತರ ಎರಡು ಮೂರು ದಿನಗಳಿಗೊಮ್ಮೆ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ಜಿಲ್ಲೆಗಳ ಪರಿಹಾರ ಕಾಮಗಾರಿ ಬಗ್ಗೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಬರ ಕಾಮಗಾರಿ ಬಗ್ಗೆ ಎರಡು ಮೂರು ದಿನಗಳಿಗೊಮ್ಮೆ ವಿಮರ್ಶೆಯನ್ನೂ ನಡೆಸುವರು ಎಂದು ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್ ಹೇಳಿದರು.
ಕೆಲಸವಿಲ್ಲದ ಕೂಲಿಗಳಿಗೆ ಕಾಳಿನ ಜೊತೆ ಕೂಲಿಯನ್ನೂ ನೀಡಲು ಸಂಪುಟ ತೀರ್ಮಾನಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ವರದಿಯ ಆಧಾರದ ಮೇಲೆ ಅಗತ್ಯ ಹಣವನ್ನು ಸೋಮವಾರವೇ ಬಿಡುಗಡೆ ಮಾಡಲಾಗುತ್ತದೆ ಎಂದರು.
ಜಾನುವಾರುಗಳಿಗೂ ಉಚಿತ ಮೇವು : ಬರ ಪೀಡಿತ ಪ್ರದೇಶಗಳ ಜಾನುವಾರುಗಳಿಗೆ ಮೇವು ಉಚಿತ ಮೇವು ಒದಗಿಸಲು 2 ಲಕ್ಷ ಟನ್ ಪಶು ಆಹಾರವನ್ನು ರಾಜ್ಯಕ್ಕೆ ಸರಬರಾಜು ಮಾಡುವುದಾಗಿ ಕೇಂದ್ರ ಸರ್ಕಾರ ಆಶ್ವಾಸನೆ ಕೊಟ್ಟಿದೆ. ಮುಖ್ಯಮಂತ್ರಿ ನೇತೃತ್ವದ ನಿಯೋಗಕ್ಕೆ ಪ್ರಧಾನಿ ಅವರಲ್ಲಿ ಬರ ಪರಿಹಾರಕ್ಕೆ ನೆರವು ಯಾಚಿಸಿದಾಗ, ವಾಜಪೇಯಿ ಈ ಭರವಸೆ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಎಚ್.ಸಿ.ಶ್ರೀಕಂಠಯ್ಯ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ