ಆಂಧ್ರದ ವಿರುದ್ಧ ವಾರದೊಳಗೆ ಸುಪ್ರಿಂಕೋರ್ಟ್ನಲ್ಲಿ ರಾಜ್ಯದ ದಾವೆ
ಬೆಂಗಳೂರು : ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಚಾವತ್ ಆಯೋಗದ ತೀರ್ಪನ್ನು ಉಲ್ಲಂಘಿಸಿ ಐದು ಅಕ್ರಮ ನೀರಾವರಿ ಕಾಮಗಾರಿಗಳಲ್ಲಿ ತೊಡಗಿರುವ ಆಂಧ್ರಪ್ರದೇಶದ ವಿರುದ್ಧ , ರಾಜ್ಯ ಸರ್ಕಾರ ಇನ್ನೊಂದು ವಾರದಲ್ಲಿ ಸುಪ್ರಿಂಕೋರ್ಟ್ನ ಕಟ್ಟೆ ಹತ್ತುವುದೆಂದು ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಚಂದ್ರೇಗೌಡ, ಆಂಧ್ರ ಪ್ರದೇಶದ ವಿರುದ್ಧ ನ್ಯಾಯಾಂಗ ನಿಂದನೆ ಅಥವಾ ನೇರ ದಾವೆಯನ್ನು ಹೂಡುವ ಬಗೆಗೆ ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ ಎಂದರು. ಪ್ರಸ್ತುತ ಸಂದರ್ಭದಲ್ಲಿ , ಆಂಧ್ರದ ಸಲ್ಲದ ನಡವಳಿಕೆಯನ್ನು ನ್ಯಾಯಾಂಗದ ಗಮನಕ್ಕೆ ತರುವುದಷ್ಟೇ ರಾಜ್ಯದ ಪಾಲಿಗುಳಿದಿರುವ ದಾರಿ ಎಂದವರು ಪ್ರತಿಕ್ರಿಯಿಸಿದರು.
ಶ್ರೀಶೈಲಂ ಎಡದಂಡೆ ಕಾಲುವೆ, ಶ್ರೀಶೈಲಂ ಬಲದಂಡೆ ಕಾಲುವೆ, ಪುಲಿಚಿಂತಾಲ, ತೆಲುಗು ಗಂಗಾ ಹಾಗೂ ಭೀಮಾ ನೀರಾವರಿ ಅನಧಿಕೃತ ಕಾಮಗಾರಿಗಳಲ್ಲಿ ತೊಡಗಿರುವ ಆಂಧ್ರ ಸರ್ಕಾರದ ಕ್ರಮದ ಕುರಿತು ರಾಜ್ಯ ಸರ್ಕಾರ ಈಗಾಗಲೇ ತನ್ನ ಪ್ರತಿಭ ಟನೆಯನ್ನು ಕೇಂದ್ರಕ್ಕೆ ತಿಳಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಚಂದ್ರೇಗೌಡ ಹೇಳಿದರು.
(ಇನ್ಫೋ ವಾರ್ತೆ)