ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣಮೀಸಲಾತಿ ವಿಸ್ತರಣೆ
ಬೆಂಗಳೂರು : ಕನ್ನಡ ಮಾಧ್ಯಮದಲ್ಲಿ 1 ರಿಂದ 10 ನೇ ತರಗತಿಯವರೆಗೆ ಕಲಿತ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿ ಶಿಕ್ಷಣದಲ್ಲಿ ನೀಡಿರುವ ಪ್ರತಿಶತಃ 5 ರ ಮೀಸಲಾತಿಯನ್ನು ಪಾಲಿಟೆಕ್ನಿಕ್, ಬಿ.ಇಡಿ, ಎಂ.ಇಡಿ, ಬಿ.ಪಿ.ಇಡಿ, ಎಂ.ಪಿ.ಇಡಿ ಮುಂತಾದ ವೃತ್ತಿ ಕೋರ್ಸ್ಗಳಿಗೂ ವಿಸ್ತರಿಸಲು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿರ್ಧರಿಸಿದ್ದಾರೆ.
ಮೇ ತಿಂಗಳ 19 ರಂದು ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟ- ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪ್ರವೇಶಕ್ಕೆ ಮಾತ್ರ ಶೇ.5 ರ ಮೀಸಲಾತಿ ನೀಡಲು ತೀರ್ಮಾನಿಸಿತ್ತು . ಸಂಪುಟದ ಈ ನಿರ್ಧಾರ ಅಪೂರ್ಣವಾಗಿದ್ದು , ಇತರ ವೃತ್ತಿ ಶಿಕ್ಷಣ ಕೋರ್ಸ್ಗಳಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ ಎನ್ನುವ ಸೊಲ್ಲು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮೀಸಲಾತಿ ವಿಸ್ತರಣೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಧಾನಸಭೆ ಮೊಗಸಾಲೆಯ ಉನ್ನತ ಮೂಲಗಳು ತಿಳಿಸಿವೆ.
ಮೀಸಲಾತಿ ವಿಸ್ತರಣೆಯ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದು - ಅದರಲ್ಲಿ ಎಲ್ಲ ಸ್ನಾತಕೋತ್ತರ ಪದವಿಗಳಿಗೂ ಮೀಸಲಾತಿ ಸವಲತ್ತನ್ನು ವಿಸ್ತರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿತ್ತು .
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ್ದ ‘ಶಿಕ್ಷಣದಲ್ಲಿ ಮಾಧ್ಯಮ’ ಎನ್ನುವ ವರದಿಯಲ್ಲೂ 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಗಿತ್ತು . ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮೀಸಲಾತಿ ವಿಸ್ತರಣೆ ನಿರ್ಣಯವನ್ನು ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಈ ಮೀಸಲಾತಿ ವಿಸ್ತರಣೆ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಗೆ ಅನ್ವಯಿಸುವ ಬಗ್ಗೆ ಯಾವುದೇ ವಿಷಯ ತಿಳಿದು ಬಂದಿಲ್ಲ.
(ಇನ್ಫೋ ವಾರ್ತೆ)