ರಾಜಧಾನಿಯಿಂದ ಬಂದರು ನಗರಿಗೆ ಆಯಿಲ್ ಪೈಪ್ಲೈನ್ ಸಂಪರ್ಕ
ಬೆಂಗಳೂರು : 1790 ಕೋಟಿ ರುಪಾಯಿಗಳ ವೆಚ್ಚದಲ್ಲಿ ಬೆಂಗಳೂರು ಮತ್ತು ಮಂಗಳೂರುಗಳ ನಡುವೆ ಆಯಿಲ್ ಪೈಪ್ಲೈನ್ ಅಳವಡಿಸುವ ಯೋಜನೆಯ ಒಪ್ಪಂದಕ್ಕೆ ಶುಕ್ರವಾರ ರಾಜ್ಯ ಸರ್ಕಾರ ಹಾಗೂ ಭಾರತ್ ಪೆಟ್ರೋಲಿಯಂ ಅಂಕಿತ ಹಾಕಿದವು. ಇದರೊಂದಿಗೆ ಬಹು ದಿನಗಳ ಮಹತ್ವಾಕಾಂಕ್ಷೆಯ ಯೋಜನೆ ಜೀವ ತುಂಬಿಕೊಂಡಿದೆ.
ಬೆಂಗಳೂರು- ಮಂಗಳೂರುಗಳ ನಡುವೆ ಅಳವಡಿಸುವ ಆಯಿಲ್ ಪೈಪ್ಲೈನ್ನಿಂದಾಗಿ ಪ್ರತಿದಿನ 2.5 ಮೆಟ್ರಿಕ್ ಟನ್ ತೈಲ ಸಾಗಾಣಿಕೆ ಸಾಧ್ಯವಾಗಲಿದೆ ಎಂದು ಕಾಮಗಾರಿಯ ಪ್ರಾಮುಖ್ಯತೆಯ ಬಗ್ಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕಾಮಗಾರಿ ಪೂರ್ಣಗೊಳ್ಳುವುದರಿಂದ ರಾಜಧಾನಿ ಹಾಗೂ ಬಂದರು ನಗರಿ ನಡುವಣ ಸಾರಿಗೆ ಸಂಪರ್ಕ ಮತ್ತಷ್ಟು ಸುಧಾರಿಸುವ ಕುರಿತು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಯೋಜನೆ ಎರಡೂ ನಗರಿಗಳ ಪ್ರಮುಖ ಸಂಪರ್ಕವಾಗಿದ್ದು , ಇದರ ಸಾಮರ್ಥ್ಯವನ್ನು ಮತ್ತಷ್ಟು ಉತ್ತಮಗೊಳಿಸಬೇಕಾಗಿದೆ ಎಂದು ಕೃಷ್ಣ ಹೇಳಿದರು. ಯೋಜನೆಗೆ ಸಂಬಂಧಿಸಿದಂತೆ ಭಾರತ್ ಪೆಟ್ರೋಲಿಯಂನ ಮುಖ್ಯಸ್ಥ ಎಚ್.ಪಿ. ಬಾಲನ್ರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
(ಇನ್ಫೋ ವಾರ್ತೆ)