ವೀರಪ್ಪನ್ ಶಿಕಾರಿ : ತಮಿಳುನಾಡು ಎಸ್ಟಿಎಫ್ ಮುಖ್ಯಸ್ಥರಾಗಿ ದ್ಯಾವರಂ
ಚೆನ್ನೈ : ನರಹಂತಕ ವೀರಪ್ಪನ್ ಶಿಕಾರಿಯಲ್ಲಿ ತೊಡಗಿರುವ ತಮಿಳುನಾಡು ಕಾರ್ಯಾಚರಣೆ ಪಡೆಯ ಮುಖ್ಯಸ್ಥರನ್ನಾಗಿ ತಮಿಳುನಾಡಿನ ಮಾಜಿ ಪೊಲೀಸ್ ಮಹಾ ನಿರ್ದೇಶಕ ಡಬ್ಲ್ಯೂ.ಐ. ದ್ಯಾವರಂ ಅವರನ್ನು ನೇಮಿಸಿರುವುದಾಗಿ ಮುಖ್ಯಮಂತ್ರಿ ಜಯಲಲಿತಾ ಶುಕ್ರವಾರ ವಿಧಾನಸಭೆಯಲ್ಲಿ ಪ್ರಕಟಿಸಿದ್ದ್ದಾರೆ.
ದ್ಯಾವರಂ ಅವರನ್ನು ತಮಿಳುನಾಡು- ಕರ್ನಾಟಕ ಉಭಯ ರಾಜ್ಯಗಳ ಜಂಟಿ ಕಾರ್ಯಾಚರಣೆ ಪಡೆಯ ಮುಖ್ಯಸ್ಥರನ್ನಾಗಿಯೂ ನೇಮಿಸಲು ಉದ್ದೇಶಿಸಲಾಗಿದ್ದು, ಈ ಕುರಿತಂತೆ ಸದ್ಯದಲ್ಲೇ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಜಯಲಲಿತಾ ಹೇಳಿದರು. ಗಡಿ ಭದ್ರತಾ ಪಡೆಯ ಕೆ. ವಿಜಯ ಕುಮಾರ್ ಅವರನ್ನು ದೇವರಂ ಅವರಿಗೆ ಸಹಾಯಕರನ್ನಾಗಿ ನೇಮಿಸಲು ಉದ್ದೇಶಿಸಿರುವುದಾಗಿಯೂ ಅವರು ಹೇಳಿದರು.
ಈವರೆಗೆ ವೀರಪ್ಪನ್ ಕಾರ್ಯಾಚರಣೆ ಪಡೆಯ ನೇತೃತ್ವ ವಹಿಸಿದ್ದ ಎಲ್ಲ ಅಧಿಕಾರಿಗಳಿಗಳಿಗಿಂತ ದ್ಯಾವರಂ ಅವರು ಹಿರಿಯ ಅಧಿಕಾರಿಯಾಗಿದ್ದಾರೆ ಎಂದು ಅವರ ನೇಮಕಕ್ಕೆ ಜಯಲಲಿತಾ ಕಾರಣ ನೀಡಿದರು. ತಮ್ಮನ್ನು ಉಭಯ ರಾಜ್ಯಗಳ ಎಸ್ಟಿಎಫ್ ಮುಖ್ಯಸ್ಥರನ್ನಾಗಿ ನೇಮಿಸಿದಲ್ಲಿ ವೀರಪ್ಪನ್ ಶಿಕಾರಿಯಲ್ಲಿ ಯಶಸ್ವಿಯಾಗಿಯೇ ತೀರುವುದಾಗಿ ಈ ಮುನ್ನ ದ್ಯಾವರಂ ಹೇಳಿಕೊಂಡಿದ್ದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ