ಯಾವುದೇ ಕ್ಷಣ ಚಂಡಮಾರುತ ಅಪ್ಪಳಿಸುವ ಆತಂಕದಲ್ಲಿ ಗುಜರಾತ್
ಸೂರತ್ : ಕಳೆದ ಜನವರಿಯಲ್ಲಷ್ಟೇ ಮಾರಣಾಂತಿಕ ಭೂಕಂಪದ ಹಾವಳಿಯಿಂದ ತತ್ತರಿಸಿದ್ದ ಗುಜರಾತ್ ಈಗ ಚಂಡಮಾರುತದ ಆತಂಕ ಎದುರಿಸುತ್ತಿದೆ. ಗುರುವಾರ ಹಾಗೂ ಶುಕ್ರವಾರ ಸಂಜೆಯಾಳಗೆ ಯಾವುದೇ ಕ್ಷಣದಲ್ಲಿ ಸೂರತ್ ಮತ್ತು ಕ್ಯಾಂಬೇ ನಡುವಣ ಕರಾವಳಿಗೆ ಚಂಡಮಾರುತ ಪ್ರವೇಶಿಸುವ ಸಾಧ್ಯತೆಯಿದೆ.
ಚಂಡಮಾರುತವನ್ನು ಎದುರಿಸಲು ರಾಜ್ಯಾದ್ಯಂತ ವ್ಯಾಪಕ ಸಿದ್ಧತೆಗಳನ್ನು ರಾಜ್ಯ ಸರ್ಕಾರ ನಡೆಸಿದ್ದು, ಭಾವ್ನಗರ್, ಜುನಾಗಢ್, ಜಾಮ್ನಗರ್, ರಾಜ್ಕೋಟ್, ಸೂರತ್, ಕಛ್, ವಲ್ಸಾದ್, ನವ್ಸಾರಿ, ಆನಂದ್ ಹಾಗೂ ಭಾರುಚ್ ಜಿಲ್ಲೆಗಳಲ್ಲಿ ಚಂಡಮಾರುತ ವಿರುದ್ಧ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವನ್ನು ಎದುರಿಸಲು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವುದನ್ನು ಸೂರತ್ನ ಕಲೆಕ್ಟರ್ ಸಂಗೀತಾ ಸಿಂಗ್ ದೃಢಪಡಿಸುತ್ತಾರೆ. ಕಂದಾಯ ಇಲಾಖೆ, ಪೊಲೀಸ್, ಅಗ್ನಿ ಶಾಮಕ ದಳ, ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಗುಜರಾತ್ ವಿದ್ಯುಚ್ಛಕ್ತಿ ಮಂಡಳಿಗಳ ಮುಖ್ಯಸ್ಥರು ಬುಧವಾರ ರಾತ್ರಿ ಸಭೆ ಸೇರಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಸೂರತ್ನಲ್ಲೀಗ ಕಟ್ಟೆಚ್ಚರ ಕ್ರಮವನ್ನು ಸಾರಲಾಗಿದೆ ಎಂದು ಸಂಗೀತಾ ತಿಳಿಸಿದ್ದಾರೆ.
ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂರತ್ನ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಭಾರೀ ಮಳೆಯಿಂದ ಸಂಭವಿಸಬಹುದಾದ ಅಪಾಯದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶದಿಂದ ಕಡಿಮೆ ಅಪಾಯದ ಸ್ಥಳಗಳಿಗೆ ಜನರನ್ನು ಕೊಂಡೊಯ್ಯಲು ಭಾರೀ ಸಂಖ್ಯೆಯ ಟ್ರಕ್ಗಳು ಕೂಡಾ ಸಿದ್ಧವಾಗಿವೆ. ಈ ನಡುವೆ ಗುಜರಾತ್ ಸರ್ಕಾರ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಸೇನೆಯನ್ನು ಕೇಳಿಕೊಂಡಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...