ಬೆಂಗಳೂರಿನ ಮೇಲ್ಸೇತುವೆ ಯೋಜನೆಗಳಿಗೆ 150 ಕೋಟಿ ರು. - ಕೃಷ್ಣ
ಬೆಂಗಳೂರು : ಬೆಂಗಳೂರಿನ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು 27 ಮೇಲ್ಸೇತುವೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಇದಕ್ಕೆ 150 ಕೋಟಿ ರುಪಾಯಿ ವೆಚ್ಚ ತಗುಲಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಿಚ್ಮಂಡ್ ರಸ್ತೆಯ ಬಳಿ ನಿರ್ಮಿಸಲಾಗಿರುವ ಮೇಲು ಸೇತುವೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮೊದಲ ಹಂತದ ಮೇಲ್ಸೇತುವೆ ಕಾಮಗಾರಿ ಬರುವ ಅಕ್ಟೋಬರ್ನಲ್ಲಿ ಆರಂಭವಾಗಲಿದೆ ಎಂದರು.
ದೊಡ್ಡ ಫ್ಲೈಓವರ್ಗಳಿಂದ ಹೆಚ್ಚು ಪ್ರಯೋಜನವಿಲ್ಲ ಎಂಬ ಅಂಶ ಹೊರಬಿದ್ದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದ ಅವರು, ಶೀಘ್ರದಲ್ಲೇ 11 ಪುಟ್ಟ ಮೇಲ್ದಾರಿ ಅಥವಾ ಮೇಲ್ಸೇತುವೆಗಳ ಕಾಮಗಾರಿಗಳಿಗೆ ಚಾಲನೆ ದೊರಕಲಿದೆ ಎಂದರು.
ಮುಂದಿನ 3 ತಿಂಗಳ ಅವಧಿಯಲ್ಲಿ ಟೆಂಡರ್ ಕರೆಯಲಾಗುವುದು, ಮಳೆಗಾಲ ಮುಗಿದ ಕೂಡಲೇ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದೂ ಅವರು ಹೇಳಿದರು. ಮೇಗಾ ಮೇಲ್ಸೇತುವೆಗಳು ಸಂಚಾರ ನಿಯಂತ್ರಿಸಲು ವಿಫಲವಾಗಿವೆ. ಮಾರುಕಟ್ಟೆ ಬಳಿ 99 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶ್ರೀಬಾಲಗಂಗಾಧರನಾಥ ಮೇಲ್ಸೇತುವೆ ಇದಕ್ಕೆ ಜ್ವಲಂತ ಉದಾಹರಣೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರದ ಮೇಯರ್ ಪ್ರೇಮಾ ಕಾರ್ಯಪ್ಪ ವಹಿಸಿದ್ದರು. ಸಮಾರಂಭದಲ್ಲಿ ಕೃಷ್ಣ ಅವರ ಸಚಿವ ಸಂಪುಟದ ಹಲವು ಸಚಿವರು ಹಾಗೂ ಸಂಸತ್ ಸದಸ್ಯರು ಪಾಲ್ಗೊಂಡಿದ್ದರು.
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ