ಬೆಂಗಳೂರಲ್ಲಿ ಅಕ್ರಮ ಕಟ್ಟಡ ನೆಲಸಮ, 5 ಕೋಟಿ ರು. ಭೂಮಿ ವಶ
ಬೆಂಗಳೂರು : ಕನಕಪುರ ರಸ್ತೆಯ ಜರಗನಹಳ್ಳಿ, ಸಾರಕ್ಕಿ, ಪುಟ್ಟೇನಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡ, ಶಾಲೆ ಹಾಗೂ ವಾಣಿಜ್ಯ ಸಂಕೀರ್ಣ ಹಾಗೂ ಕೈಗಾರಿಕಾ ಷೆಡ್ಗಳನ್ನು ಬುಧವಾರ ಬೆಂಗಳೂರು ಮಹಾನಗರ ಕಾರ್ಯಪಡೆ ನೆಲಸಮಗೊಳಿಸಿತು.
ಜೆ.ಪಿ. ನಗರ 7ನೇ ಹಂತದ ಸಾರಕ್ಕಿ ಪ್ರದೇಶದಲ್ಲಿ ಸುಮಾರು 7 ಎಕರೆ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ, ಜಿ.ಕೆ.ಎಂ. ಕಾಲೇಜು, ಕಲ್ಯಾಣ ಮಂಟಪ, ಷೇರು ವಹಿವಾಟು ಮಳಿಗೆ, ವಸತಿಗೃಹಗಳನ್ನು ಕಾರ್ಯಪಡೆ ಯಂತ್ರಗಳು ನೆಲಸಮಗೊಳಿಸಿದವು.
ಕೆರೆ ಅಂಗಳದಲ್ಲಿ ರಾಮಕುಮಾರ ಶೆಟ್ಟಿ ಎಂಬುವವರು ನಿರ್ಮಿಸಿದ್ದ ಸೀಮೆಎಣ್ಣೆ ಬಂಕ್, ಕೈಗಾರಿಕೆ ಆಯಿಲ್ ಮಿಲ್ಗಳೂ ಈ ಕಾರ್ಯಾಚರಣೆಗೆ ತುತ್ತಾದವು. 86 ಎಕರೆ ಪ್ರದೇಶದ ಕೆರೆಯ 7 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಕಾರ್ಯಾಚರಣೆಯಲ್ಲಿ 5 ಕೋಟಿ ರುಪಾಯಿ ಬೆಲೆಬಾಳುವ 3 ಎಕರೆ ಭೂಮಿಯನ್ನು ಮತ್ತೆ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಬಿಎಂಟಿಎಫ್ನ ಪೊಲೀಸ್ ಮಹಾನಿರೀಕ್ಷಕ ಕಸ್ತೂರಿ ರಂಗನ್, ವಿಶೇಷ ಜಿಲ್ಲಾಧಿಕಾರಿ ಎಸ್.ಎಸ್. ನಾಗರಾಜ್, ಎಸ್ಪಿ ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಾಚರಣೆ ನಡೆಯುತ್ತಿದ್ದ ಸಂದಂರ್ಭದಲ್ಲಿ ಕೆಲಕಾಲ ಬೆಂಗಳೂರು - ಕನಕಪುರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.












Click it and Unblock the Notifications