ಚಂಡಮಾರುತ ತಂದ ಮಳೆಗೆ ಕೊಡಗಿನ ಮಹಿಳೆಯ ಬಲಿ
ಬೆಂಗಳೂರು : ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿ ಪ್ರದೇಶದಲ್ಲಿ ಬುಧವಾರ ಧಾರಾಕಾರವಾಗಿ ಮಳೆ ಸುರಿದಿದ್ದು, ಕೊಡಗಿನಲ್ಲಿ ಸಿಡಿಲು ಬಡಿದು ಮಹಿಳೆಯಾಬ್ಬಳು ಮೃತ ಪಟ್ಟಿದ್ದಾರೆ.
ಮಂಗಳೂರಿನಲ್ಲಿ ಜನರು ಚಂಡಮಾರುತ ಅಪ್ಪಳಿಸುವ ಭೀತಿಯಲ್ಲಿದ್ದರೂ ಬುಧವಾರ ಸಂಜೆಯವರೆಗೆ ಬಿರುಗಾಳಿಯ ಮುನ್ಸೂಚನೆಯೇನೂ ಕಂಡು ಬರಲಿಲ್ಲ. ಆದರೆ ರಾತ್ರಿ, ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತ್ತು. ಕರ್ನಾಟಕದ ಕರಾವಳಿಯಲ್ಲಿಯೇ ಅತಿ ಹೆಚ್ಚು ಮಳೆ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆಯಲ್ಲಿ (41.6 ಮಿಮೀ) ಬಿದ್ದಿರುವ ವರದಿಯಾಗಿದೆ. ಬಂಟ್ವಾಳ (39.8), ಪುತ್ತೂರು (18.6), ಬೆಳ್ತಂಗಡಿ ( 10.8) ಮಿಲಿಮೀಟರ್ ಮಳೆ ಬಿದ್ದಿದೆ. ಕನಿಷ್ಠ ಮಳೆ ಕಂಡ ಪ್ರದೇಶ ಸುಳ್ಯ( 1ಮಿಮೀ). ಮುಂದಿನ 24 ಗಂಟೆಗಳ ಅವಧಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಸಮುದ್ರಕ್ಕಿಳಿಯದಂತೆ ಜಿಲ್ಲಾಧಿಕಾರಿಗಳು ಮೀನುಗಾರರಿಗೆ ಸೂಚಿಸಿದ್ದಾರೆ.
ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಕೊಡಗಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ಬುಧವಾರದಿಂದ ಸುರಿಯುತ್ತಿರುವ ಮಳೆ ಗುರುವಾರ ಬೆಳಗ್ಗೆ ಮತ್ತಷ್ಟು ತೀವ್ರವಾಗಿದೆ.
ಶರಾವತಿ ಜಲಾನಯನ ಪ್ರದೇಶದಲ್ಲಿ ರೆಚ್ಚೆ ಹಿಡಿದು ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ. ಕರೂರು ಬಾರಂಗಿ ಪ್ರದೇಶಗಳಲ್ಲಿ ಬುಧವಾರ ಭಾರೀ ಬಿರುಗಾಳಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಹಾನಿಯಾದ ವರದಿಯಾಗಿಲ್ಲ.
ಪಾವಿನಕುರ್ವಾ ಗ್ರಾಮದ ನಿವಾಸಿಗಳ ಸ್ಥಳಾಂತರ
ಕಾರವಾರದಲ್ಲಿ ಚಂಡ ಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಪಾವಿನಕುರ್ವಾ ಗ್ರಾಮದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಸುಮಾರು 120 ಕುಟುಂಬಗಳನ್ನು ಕರ್ಕಿಯ ಚೆನ್ನಕೇಶವ ಪ್ರೌಢಶಾಲೆ ಮತ್ತು ದೈವಜ್ಞ ಕಲ್ಯಾಣಂಟಪದಲ್ಲಿ ಇರಿಸಲಾಗಿದೆ.
ಪ್ರಸ್ತುತ ಚಂಡಮಾರುತವು ಕರ್ನಾಟಕದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ಆದರೆ ಗೋವಾದಿಂದ ಸುಮಾರು 300 ಕಿಮೀ ವೇಗದಲ್ಲಿ ನೈರುತ್ಯ ದಿಕ್ಕಿನತ್ತ ಚಲಿಸುತ್ತಿರುವ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದೆ. ಇದು ಗುರುವಾರ ಮಧ್ಯಾಹ್ನದ ಹೊತ್ತಿಗೆ ಮಹಾರಾಷ್ಟ್ರದ ದೇವಘಡ ಮತ್ತು ಅಲಿಬಾಗ್ ಕರಾವಳಿಯನ್ನು ದಾಟಲಿದ್ದು, ಗುಜರಾತಿನ ದಕ್ಷಿಣ ಭಾಗದ ಮೇಲೆ ಅಪ್ಪಳಿಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...