ಬಿಜಾಪುರ, ಗುಲ್ಬರ್ಗಾದ ಜಲಕ್ಷಾಮ ನಿವಾರಿಸಲು ರಾಜ್ಯದ ಕ್ರಮ
ಬೆಂಗಳೂರು : ಗುಲ್ಬರ್ಗಾ, ಬಿಜಾಪುರ ಸೇರಿದಂತೆ ಭೀಮಾ ನದಿ ತೀರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಯೋಜನೆಗಳಿಗೆ ಈಗ ಚಾಲನೆ ದೊರೆತಿದೆ. ಭೀಮಾ ನದಿ ಇಲ್ಲಿ ಹರಿಯುತ್ತಿದ್ದರೂ ಕೂಡ ಈ ಭಾಗದ ಜನರ ನೀರಿನ ಬವಣೆ ತಪ್ಪಿಲ್ಲ.
ಬೇಸಿಗೆ ಬಂತೆಂದರೆ, ನೀರಿನ ಕ್ಷಾಮ ತಲೆದೋರುತ್ತದೆ. ಭೀಮೆ ಒಣಗುತ್ತದೆ. ಈ ಬಾರಿಯಂತೂ ಭೀಮಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಪದೇ ಪದೇ ಪ್ರಾರ್ಥನೆ ಸಲ್ಲಿಸುವ ಸ್ಥಿತಿ ನಿರ್ಮಾಣವಾಗಿತ್ತು. ಕೃಷ್ಣ ಹಾಗೂ ಭೀಮಾ ನದಿಗೆ ನೀರು ಬಿಡಲು ಒಪ್ಪಿದ್ದ ಮಹಾರಾಷ್ಟ್ರ ಸರಕಾರ ಕೊಂಚ ತಡಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದ ರೈತರು ಜಲಾಶಯದ ಗೇಟ್ಗಳನ್ನು ಕಿತ್ತೆಸೆಯುವ ಹಂತವನ್ನೂ ದಾಟಿದರು.
ಈ ಮಧ್ಯೆ ಮಹಾರಾಷ್ಟ್ರ ಸರಕಾರ ಕೊಯ್ನಾ ಜಲಾಶಯದಿಂದ ಭೀಮಾನದಿಗೆ 1 ಟಿ.ಎಂ.ಸಿ. ನೀರು ಬಿಡುಗಡೆ ಮಾಡಿದ್ದು, ಗುರುವಾರ (ಮೇ 24) ಸಂಜೆ ಹೊತ್ತಿಗೆ ಅದು ಕೊರ್ತಿ ಕೊಲ್ಹಾರ ತಲುಪಲಿದೆ. ಉಜಿನಿಯಿಂದ ಮತ್ತೊಂದು ಟಿ.ಎಂ.ಸಿ. ನೀರನ್ನು ರಾಜ್ಯಕ್ಕೆ ಮಹಾರಾಷ್ಟ್ರ ಹರಿಸುತ್ತಿದೆ. ತನ್ನ ಪಾಲಿನ ನೀರನ್ನು ಮಹಾರಾಷ್ಟ್ರ ಮಾತ್ರ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದರೂ, ಕರ್ನಾಟಕ ಭೀಮಾ ನದಿಯ ನೀರಿನ ತನ್ನ ಪಾಲನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಭೀಮಾ ನದಿ ತೀರದಲ್ಲಿ 11 ಬ್ಯಾರೇಜ್ಗಳ ನಿರ್ಮಾಣ ಯೋಜನೆಗೆ ಈಗ ಚಾಲನೆ ದೊರೆತಿದೆ. ಈ ಪ್ರದೇಶಗಳಿಗೆ ಅಂಟಿರುವ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಲು ನಿರ್ಧರಿಸಿರುವ ರಾಜ್ಯ ಸರಕಾರ 11 ಬ್ಯಾರೇಜ್ಗಳ ನಿರ್ಮಾಣಕ್ಕೆ ಪೂರ್ವಭಾವಿ ಸಿದ್ಧತೆಯಲ್ಲಿ ತೊಡಗಿದೆ. ಈ ವಿಷಯವನ್ನು ಗುರುವಾರ ನಡೆದ ಮಹತ್ವದ ಸಭೆಯ ಬಳಿಕ ರಾಜ್ಯ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಬ್ಯಾರೇಜ್ಗಳ ನಿರ್ಮಾಣವಾದರೂ ಜೇವರ್ಗಿ ಹಾಗೂ ಸುತ್ತ ಮುತ್ತಲ ಪ್ರದೇಶಗಳಿಗೆ ಯಾವುದೇ ಪ್ರಯೋಜವಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಯಿತು ಎಂದೂ ಅವರು ಹೇಳಿದರು.
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ