ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೇರುಸೊಪ್ಪ ರಾಷ್ಟ್ರಕ್ಕರ್ಪಣೆ : ‘ ಸಾಧಿಸಬೇಕಾದುದು ಇನ್ನೂ ಬಹಳಷ್ಟು’

By Staff
|
Google Oneindia Kannada News

ಹೊನ್ನಾವರ : ಇನ್ನೈದು ವರ್ಷಗಳಲ್ಲಿ 2 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ 10 ಸಾವಿರ ಕೋಟಿ ರುಪಾಯಿ ವೆಚ್ಚದ ಮಹತ್ತರ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಕಟಿಸಿದ್ದಾರೆ.

240 ಮೆಗಾವ್ಯಾಟ್‌ ಸಾಮರ್ಥ್ಯದ ಗೇರುಸೊಪ್ಪ ಜಲವಿದ್ಯುತ್‌ (ಶರಾವತಿ ಟೇಲ್‌ರೇಸ್‌) ಯೋಜನೆಯ ಎರಡು ಘಟಕಗಳನ್ನು ಮಂಗಳವಾರ ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತಾಡುತ್ತಿದ್ದರು. ಈ ಯೋಜನೆ 531 ಕೋಟಿ ರುಪಾಯಿ ವೆಚ್ಚದ್ದಾಗಿದೆ. ರಾಜ್ಯ ವಿದ್ಯುತ್‌ ಉತ್ಪಾದನಾ ವ್ಯವಸ್ಥೆಯಲ್ಲಿ ಸುಧಾರಣೆ ಅನಿವಾರ್ಯವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ವಿದ್ಯುದುತ್ಪಾದನೆ ಸರ್ಕಾರದ ಈಗಿನ ನಿಲುವು ಎಂದು ಕೃಷ್ಣ ಹೇಳಿದರು.

ಎನ್ರಾನ್‌ ಒಂದು ಹೆಬ್ಬಾವು : ಕೊಜೆಂಟ್ರಿಕ್ಸ್‌ ಯೋಜನೆಯ ಮಾತುಕತೆ ವಿಫಲವಾದಾಗ, ಸರ್ಕಾರ ಟೀಕೆಗೊಳಗಾಯಿತು. ಆದರೆ, ವಾಸ್ತವದಲ್ಲಿ ಮುಂದಾಗಬಹುದಾಗಿದ್ದ ಅನಾಹುತದಿಂದ ರಾಜ್ಯ ಪಾರಾಗಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಳಿ (ಎಂ.ಎಸ್‌.ಇ.ಬಿ) ಎನ್ರಾನ್‌ ಯೋಜನೆಯಿಂದ ತೊಂದರೆಗೆ ಸಿಲುಕಿಕೊಂಡಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಏನೂ ಮಾಡಲಾಗುತ್ತಿಲ್ಲ. ಎನ್ರಾನ್‌ ಒಂದು ಹೆಬ್ಬಾವು. ಅದರ ಹಿಡಿತಕ್ಕೆ ಸಿಲುಕಿ, ಎಂ.ಎಸ್‌.ಇ.ಬಿ ನರಳುತ್ತಿದೆ ಎಂದರು.

ಟ್ಯಾಪ್ಕೋ ಕಂಪನಿ, 290 ಮೆಗಾವ್ಯಾಟ್‌ ಸಾಮರ್ಥ್ಯದ ಆಲಮಟ್ಟಿ ಯೋಜನೆಗೆ 1400 ಕೋಟಿ ವೆಚ್ಚ ತಗಲುವುದೆಂದು ತನ್ನ ವರದಿಯಲ್ಲಿ ನಮೂದಿಸಿತ್ತು. ಕೆ.ಪಿ.ಸಿ. ತನ್ನ ವರದಿಯಲ್ಲಿ ಇದೇ ಯೋಜನೆಯನ್ನು ಕೇವಲ 700 ಕೋಟಿ ರುಪಾಯಿಯಲ್ಲಿ ಪೂರ್ಣ ಮಾಡಬಹುದೆಂದು ವರದಿ ಸಲ್ಲಿಸಿತು. ಈ ಕಾರಣಕ್ಕೆ ಸರ್ಕಾರ ತಕ್ಷಣವೇ ಯೋಜನೆಯನ್ನು ಕೆ.ಪಿ.ಸಿಗೆ ವಹಿಸಿತು. ಕಡಿಮೆ ವೆಚ್ಚ, ಹೆಚ್ಚು ವಿದ್ಯುತ್‌ ನಿರ್ಮಾಣ- ಸರ್ಕಾರದ ಒತ್ತು ಇದಕ್ಕೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕೃಷ್ಣ ಉದಾಹರಿಸಿದರು.

ಮುಂದಿನ 5 ವರ್ಷಗಳಲ್ಲಿ ರಾಜ್ಯ ಕಾಣಲಿರುವ ಹೆಚ್ಚುವರಿ ವಿದ್ಯುತ್‌

  • 2003, ಮಾರ್ಚ್‌ ಹೊತ್ತಿಗೆ ರಾಯಚೂರಿನ 210 ಮೆಗಾವ್ಯಾಟ್‌ ಸಾಮರ್ಥ್ಯದ ಥರ್ಮಲ್‌ ವಿದ್ಯುತ್‌ ಘಟಕ ಕಾರ್ಯ ನಿರ್ವಹಿಸಲಿದೆ.
  • ಅದೇ ವರ್ಷ ಡಿಸೆಂಬರ್‌ ವೇಳೆಗೆ 70 ಮೆಗಾವ್ಯಾಟ್‌ ಸಾಮರ್ಥ್ಯದ ಆಲಮಟ್ಟಿ ಘಟಕ ವಿದ್ಯುತ್‌ ಉತ್ಪಾದಿಸಲಿದೆ.
  • 2005ರ ವೇಳೆಗೆ ಬಳ್ಳಾರಿಯ ವಿಜಯನಗರದ 500 ಮೆಗಾವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಘಟಕ ಕಾರ್ಯಾರಂಭಮಾಡಲಿದೆ.
  • ಬಿಡದಿಯ ಅನಿಲ ಆಧಾರಿತ ವಿದ್ಯುತ್‌ ಯೋಜನೆ 2005-06ರ ಹೊತ್ತಿಗೆ 700 ಮೆಗಾವ್ಯಾಟ್‌ ವಿದ್ಯುತ್‌ ನೀಡಲಿದೆ.
  • ಮಂಗಳೂರಿನ ಬಾರ್ಜ್‌ ಮೌಂಟೆಡ್‌ ವಿದ್ಯುತ್‌ ಯೋಜನೆ 220 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿದೆ.
  • ಟಾಟಾ ಕಂಪನಿ 80 ಹಾಗೂ ಜಿಂದಾಲ್‌ 100 ಮೆಗಾವ್ಯಾಟ್‌ ವಿದ್ಯುತ್‌ ನೀಡಲಿದೆ.
ವಿದ್ಯುತ್‌ ಉತ್ಪಾದಿಸುವಾಗ ಜನರು ತ್ಯಾಗ ಮಾಡಲೇಬೇಕಾಗುತ್ತದೆ. ಹಾಗಂತ ಅವರ ವಸತಿಗೆ ಕುಂದು ತರುವುದು ಸರ್ಕಾರದ ಉದ್ದೇಸವಲ್ಲ. ಆಯಾ ಜಿಲ್ಲೆಯಲ್ಲಿನ ಜನರ ಮೂಲಭೂತ ಸೌಕರ್ಯಗಳು, ಪುನರ್ವಸತಿ ಮತ್ತಿತರ ವಿದ್ಯುತ್‌ ಕ್ಷೇತ್ರದ ಸಮಸ್ಯೆಗಳನ್ನು ಜಿಲ್ಲಾ ಪ್ರತಿನಿಧಿಗಳು ಪಟ್ಟಿ ಮಾಡಿ, ಸರ್ಕಾರಕ್ಕೆ ಕಳುಹಿಸಿ ಕೊಡಬೇಕು. ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಕೃಷ್ಣ ಭರವಸೆ ನೀಡಿದರು.

ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ, ಕೆನರಾ ಸಂಸದೆ ಮಾರ್ಗರೇಟ್‌ ಆಳ್ವ, ಇಂಧನ ಕಾತೆ ಸಚಿವ ವೀರಕುಮಾರ ಪಾಟೀಲ, ಜಲಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌, ಆರೋಗ್ಯ ಸಚಿವ ಡಾ.ಎ.ಬಿ.ಮಲಕ ರೆಡ್ಡಿ, ಸಂಸದರಾದ ಬಿಂಬಾ ರಾಯ್ಕರ್‌, ವಿರೋಧ ಪಕ್ಷದ ನಾಯಕ ಕೆ.ಎಚ್‌.ಶ್ರೀನಿವಾಸ್‌, ಜಗದೀಶ್‌ ಶೆಟ್ಟರ್‌ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X