ಜೂನ್ನಿಂದ 2000 ಶಾಲೆಗಳ ಬಾಗಿಲು ತೆರೆಯುವುದಿಲ್ಲ
ಮೈಸೂರು : ಎಷ್ಟೋ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳೇ ಇಲ್ಲ ಎನ್ನುವ ದೂರು ಆಗಾಗ ಕೇಳಿ ಬರುವಂಥದ್ದೇ . ಆದರೆ, ಇರುವ ಶಾಲೆಗಳಿಗೇ ವಿದ್ಯಾರ್ಥಿಗಳಿಲ್ಲ ಎನ್ನುತ್ತಿದ್ದಾರೆ ಪ್ರಾಥಮಿಕ ಶಿಕ್ಷಣ ಸಚಿವ ಎಚ್. ವಿಶ್ವನಾಥ್.
ಅವರು ಗುರ್ತಿಸಿರುವಂತೆ ಅಗತ್ಯ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಲ್ಲ ದ ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ ರಾಜ್ಯದಲ್ಲಿ 2 ಸಾವಿರ ಮಾತ್ರ. ಆ ಶಾಲೆಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಮುಚ್ಚಲಾಗುವುದು ಎಂದು ವಿಶ್ವನಾಥ್ ಹೇಳಿದ್ದಾರೆ.
ಶನಿವಾರ ಮೈಸೂರಿನಲ್ಲಿ ಜರುಗಿದ ಶೈಕ್ಷಣಿಕ ಸಮ್ಮೇಳನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಅಗತ್ಯವಿದ್ದೆಡೆ ಪ್ರಾಥಮಿಕ ಶಾಲೆಯಲ್ಲೇ 5 ನೇ ತರಗತಿಯನ್ನೂ ಪ್ರಾರಂಭಿಸಲಾಗುವುದು. ಪ್ರಸ್ತುತ ಮುಚ್ಚಲು ಉದ್ದೇಶಿಸಿರುವ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ, ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗುವುದು. ಶಾಲೆಗಳಿಗೆ ಹೋಗಿ ಬರಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದರು.
ರಾಜ್ಯದಲ್ಲಿ 195 ಶಿಕ್ಷಣ ಕ್ಷೇತ್ರಗಳಿದ್ದು , ಪ್ರತಿ ಕ್ಷೇತ್ರದಲ್ಲಿ 10 ಶಾಲೆಗಳನ್ನು ಮುಚ್ಚಲಾಗುವುದು. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ 36 ಕೋಟಿ ರುಪಾಯಿ ಉಳಿಯುವುದು. ಮುಚ್ಚುವ ಶಾಲೆಗಳಲ್ಲಿನ ಶಿಕ್ಷಕರನ್ನು ಇತರ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದು ಸಚಿವರು ಹೇಳಿದರು.
ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ತಾವು ಕ್ರಾಂತಿಯನ್ನೇನೂ ಉಂಟು ಮಾಡಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ ವಿಶ್ವನಾಥ್, ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ನ ಕೆಲವು ನ್ಯೂನತೆಗಳನ್ನು ಸರಿಪಡಿಸುತ್ತಿದ್ದೇನೆ, ಅಷ್ಟೇ ಎಂದರು .
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...