ಭ್ರಷ್ಟಾಚಾರದ ಆರೋಪ ಬಿಜೆಪಿಯರಾಜಕೀಯ ಪಿತೂರಿ- ಕೌಜಲಗಿ
ಬೆಂಗಳೂರು : ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಬಿಜೆಪಿ, ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೂ ಮಸಿ ಬಳಿಯುವ ರಾಜಕೀಯ ಪಿತೂರಿ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ವಿ.ಎಸ್.ಕೌಜಲಗಿ ಗುರುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕೋಡಿಯ ಗುತ್ತಿಗೆದಾರರೊಬ್ಬರಿಂದ ನಾನು ಲಂಚ ಪಡೆದು ರಂಗೇ ಹಾತ್ ಸಿಕ್ಕಿ ಬಿದ್ದಿದ್ದೇನೆ ಎಂಬ ಆರೋಪದ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿದ್ದು , ತನಿಖೆ ಅಂತಿಮ ಹಂತದಲ್ಲಿದೆ. 1998ರಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಾಕ್ಷ್ಯ ಎಂದು ಒದಗಿಸಲಾಗಿದ್ದ ವಿಡಿಯೋ ಸುರುಳಿಯಲ್ಲಿ ನನ್ನ ವಿರುದ್ಧದ ಯಾವ ಪುರಾವೆಯೂ ಇಲ್ಲ. ಲೋಕಾಯುಕ್ತ ಅನುಮತಿ ಕೊಟ್ಟಲ್ಲಿ ಈಗಲೇ ಜನತೆಗೆ ಇದನ್ನು ತಿಳಿಸಲು ನಾನು ಸಿದ್ಧ ಎಂದು ಕೌಜಲಗಿ ಸಿಟ್ಟಿನಿಂದ ಹೇಳಿದರು.
ಮೊದಲ ಸೊಲ್ಲು : ಬೆಳಗಾವಿ ಜಿಲ್ಲಾ ಪಂಚಾಯಿತಿಯಿಂದ ತಿಂಗಳಿಗೆ 2 ಲಕ್ಷ ರುಪಾಯಿ ಮೌಲ್ಯದ ನಿರ್ಮಾಣ ಮೂಲ ವಸ್ತುಗಳನ್ನು ಒದಗಿಸಿಕೊಡಲು ಕೌಜಲಗಿ ಗುತ್ತಿಗೆದಾರರೊಬ್ಬರಿಂದ 40 ಸಾವಿರ ರುಪಾಯಿ ಲಂಚ ಪಡೆದಿದ್ದಾರೆ ಎಂದು ಅಖಿಲ ಭಾರತ ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಎ.ಕೆ.ಕೊಟ್ರಶೆಟ್ಟಿ ಆರೋಪಿಸಿದ್ದರು.
ನಾನು ಮುಖ್ಯಮಂತ್ರಿ ಕೃಷ್ಣ ಅವರ ಜೊತೆ ಈ ಬಗ್ಗೆ ಕೂಲಂಕಷವಾಗಿ ಮಾತಾಡಿದ್ದೇನೆ. ಪಕ್ಷದ ಹೈಕಮಾಂಡ್ಗೂ ಈ ಬಗ್ಗೆ ಗೊತ್ತು. ವಿರೋಧ ಪಕ್ಷದವರು ಒತ್ತಾಯಿಸುವರೆಂದು ನಾನು ರಾಜೀನಾಮೆ ಕೊಡುವುದಿಲ್ಲ. ಲೋಕಾಯುಕ್ತ ತನ್ನ ತೀರ್ಪು ಕೊಟ್ಟ ನಂತರ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತೇನೆ ಎಂದು ಕೌಜಲಗಿ ಪ್ರಶ್ನೆಗಳಿಗೆ ಉತ್ತರಿಸಿದರು.
ಕೌಜಲಗಿ ಬಂಗಾರು ಅಲ್ಲ : ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ, ತೆಹಲ್ಕಾ ಡಾಟ್ ಕಾಂ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರನ್ನು ರೆಡ್ಹ್ಯಾಂಡೆಡ್ ಆಗಿ ಹಿಡಿದದ್ದರ ಜಾಡನ್ನು ಈಗ ಇಲ್ಲಿ ಬಿಜೆಪಿ ಅನುಸರಿಸುತ್ತಿದೆ. ಆದರೆ ತೆಹಲ್ಕಾ ಪತ್ತೆ ಹಚ್ಚಿದ್ದೇ ಬೇರೆ, ಕೌಜಲಗಿ ಪ್ರಕರಣವೇ ಬೇರೆ. ಯಾವುದೋ ವಿಡಿಯೋ ಕೆಸೆಟ್ ಇದೆ ಅಂತಿದಾರೆ. ಲೋಕಾಯುಕ್ತ ಈ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಸೂಚಿಸಲಿದೆ ಎಂದರು.
(ಯುಎನ್ಐ)