ಭಾರತದಲ್ಲಿ ಕ್ಲಿಂಟನ್ : ಕಂಪನದ ಗಾಯಕ್ಕೆಮುಲಾಮು ಹಚ್ಚುವರು
ನವದೆಹಲಿ : ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಭೂಕಂಪದಿಂದ ತತ್ತರಿಸಿರುವ ಗುಜರಾತ್ ಭೇಟಿಗಾಗಿ ಮಂಗಳವಾರ ರಾತ್ರಿ ಭಾರತಕ್ಕೆ ಬಂದಿಳಿದರು.
ಅವರನ್ನು ವಿದೇಶಾಂಗ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಜೆ. ಸಿ. ಶರ್ಮ ಬರಮಾಡಿಕೊಂಡರು. ಪ್ರಸ್ತುತ ಅಮೆರಿಕಾ ರಾಯಭಾರಿಯ ಅಧಿಕೃತ ನಿವಾಸದಲ್ಲಿ ಕ್ಲಿಂಟನ್ಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅಮೆರಿಕನ್ ಇಂಡಿಯನ್ ಪೌಂಡೇಶನ್(ಐಎಎಫ್) ಮತ್ತು ಅನಿವಾಸಿ ಭಾರತೀಯರ ಎನ್ಜಿಒ ಸಂಸ್ಥೆ ಕ್ಲಿಂಟನ್ ಭೇಟಿಯನ್ನು ಆಯೋಜಿಸಿದೆ.
ಐಎಎಫ್ ಪ್ರತಿನಿಧಿಗಳು ಗುಜರಾತ್ ಭೂಕಂಪದ ಪ್ರದೇಶದ ಕುರಿತು ಪ್ರತ್ಯಕ್ಷ ಮಾಹಿತಿ ಪಡೆದು, ನಂತರ ಪುನರ್ವಸತಿ ಕಾರ್ಯಗಳ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಭುಜ್ಮತ್ತಿತರ ಭೂಕಂಪ ಪೀಡಿತ ಪ್ರದೇಶಗಳಿಗೆ ಮತ್ತು ಅಲ್ಲಿ ನ ಜ್ಯುಬಿಲೀ ಆಸ್ಪತ್ರೆಗೆ ಕ್ಲಿಂಟನ್ ಬುಧವಾರ ಭೇಟಿ ನೀಡಲಿದ್ದಾರೆ. ಅಂದು ರಾತ್ರಿಯನ್ನು ಅಹಮದಾಬಾದ್ನಲ್ಲಿ ಕಳೆದು, ಗುರುವಾರದಂದು ಗುಜರಾತ್ನ ಮುಖ್ಯಮಂತ್ರಿ ಕೇಶುಭಾಯ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಗುರುವಾರ ಸಂಜೆ ಸಬರಮತಿ ಆಶ್ರಮದ ದರ್ಶನ ಪಡೆದು ಅಂದು ರಾತ್ರಿ ಮುಂಬಯಿಗೆ ತೆರಳುವರು.
ಪ್ರಾಕೃತಿಕ ವಿಕೋಪ ನಿರ್ವಹಣಾ ಪಡೆಯ ಉಪಾಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಮತ್ತು ಮುಂಬಯಿಯ ಖ್ಯಾತ ಉದ್ಯಮಿಗಳೊಂದಿಗೆ ಚರ್ಚಿಸಿದ ನಂತರ ಏಪ್ರಿಲ್ ಏಳರಂದು ಕಲ್ಕತ್ತಾದ ಮದರ್ ತೆರೆಸಾ ಆಸ್ಪತ್ರೆಯನ್ನು ಕ್ಲಿಂಟನ್ ವೀಕ್ಷಿಸುತ್ತಾರೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ವೀರೇನ್ ಷಾ ಭೇಟಿಯ ನಂತರ ಕ್ಲಿಂಟನ್, ವಾಜಪೇಯಿ ಭೇಟಿಗಾಗಿ ದೆಹಲಿಗೆ ತೆರಳುತ್ತಾರೆ. ವಾಜಪೇಯಿ ಜೊತೆ ಮಾತುಕತೆ ನಡೆಸಿದ ನಂತರ ಅಂದು ರಾತ್ರಿ ಭೋಜನಕ್ಕೆ ಜೊತೆಯಾಗಲಿದ್ದಾರೆ. ಜೈಪುರ ಮತ್ತು ಸಿರಸಾವಾ ಪ್ರದೇಶಗಳನ್ನು ನೋಡಿಕೊಂಡು ಏಪ್ರಿಲ್ 9ರಂದು ಅಮೆರಿಕಾಕ್ಕೆ ವಾಪಾಸಾಗುವರು.
ಕಳೆದ ಮಾರ್ಚ್ನಲ್ಲಿ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದಾಗ ಮೌರ್ಯ ಶೆರಾಟನ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಈಬಾರಿಯೂ ಅದೇ ಹೋಟೆಲ್ನಲ್ಲಿ ಉಳಿದುಕೊಳ್ಳಲಿದ್ದಾರೆ. ವ್ಯತ್ಯಾಸವೆಂದರೆ ಅಂದು ಕ್ಲಿಂಟನ್ ಅಮೆರಿಕಾದ ಅಧ್ಯಕ್ಷರಾಗಿದ್ದರು. ಭಾರತದಲ್ಲಿ ಭಧ್ರತಾ ಸಿಬ್ಬಂದಿಗಳು ಅವರ ಭೇಟಿಯ ದಿನಗಳಲ್ಲಿ ತೀವ್ರ ನಿಗಾ ವಹಿಸಿ ದುಡಿದಿದ್ದರು.
(ಇನ್ಫೋ ವಾರ್ತೆ)