ಸಾಗರ ತಾ. ವರದಪುರದಲ್ಲಿ ಶ್ರೀಧರಸ್ವಾಮಿಗಳ ಆರಾಧನೆ
ಸಾಗರ : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರ ಸೇವಾ ಮಹಾಮಂಡಲ ಏಪ್ರಿಲ್ 2ರಿಂದ 9ನೇ ತಾರೀಖಿನವರೆಗೆ ಶ್ರೀಕ್ಷೇತ್ರ ವರದಪುರದ ಶ್ರೀಧರಾಶ್ರಮದಲ್ಲಿ ಶ್ರೀಮತ್ ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳ 28ನೇ ಆರಾಧನಾ ಮಹೋತ್ಸವವನ್ನು ಏರ್ಪಡಿಸಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರುಗಳ ಸಮಾಧಿಗೆ ಮಹಾಪೂಜೆ, ಪುರಾಣ ಪ್ರವಚನ, ಭಜನೆ, ಕೀರ್ತನೆ, ಪಾಲಕಿ ಉತ್ಸವ, ಅಷ್ಟಾವಧಾನ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ. ಆರಾಧನಾ ಮಹೋತ್ಸವದ ಸ್ಮರಣಾರ್ಥವಾಗಿ ಆಶ್ರಮದಲ್ಲಿ ಸದ್ಗ್ರಂಥಗಳ ವಾಚನಾಲಯವನ್ನು ಸ್ಥಾಪಿಸುವ ಉದ್ದೇಶವೂ ಮಂಡಳಿಗಿದೆ.
ಇದೇ ಸಂದರ್ಭದಲ್ಲಿ ಶ್ರೀ ಶ್ರೀಧರ ಸಾಂಗವೇದ ವಿದ್ಯಾಲಯದಲ್ಲಿ ವೇದಾಧ್ಯಯನ ಮಾಡಿ ಸಂಪನ್ನರಾದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವೂ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಏ.2ರ ಸೋಮವಾರದಿಂದ ಏ.9ರವರೆಗೆ ಯಾಗಶಾಲಾ ಪ್ರವೇಶ, ಗುರು ಗಣಪತಿ ಪೂಜೆ, ಮಂಗಳವಾರ ಚತುರ್ದ್ರವ್ಯದಿಂದ ಗಣಪತಿ ಉಪನಿಷತ್ ಹವನ, ಪುರುಷಸೂಕ್ತ, ಶ್ರೀಸೂಕ್ತ ಹವನ, ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನ ಪೂರ್ವಕ ಕಲ್ಪೋಕ್ತ ಮಹಾಪೂಜೆ, ಪಾಲಕಿ ಉತ್ಸವ ಮೊದಲಾದ ಧಾರ್ಮಿಕ ವಿಧಿಗಳೂ ಜರುಗಲಿವೆ ಎಂದು ಶ್ರೀಧರ ಸೇವಾ ಮಹಾಮಂಡಲದ ಪ್ರಕಟಣೆ ತಿಳಿಸಿದೆ.