ನಾಗಝರಿ ವಿದ್ಯುದಾಗಾರದ ಮೊದಲ ಘಟಕದ ಸಾಮರ್ಥ್ಯವರ್ಧನೆ
ಬೆಂಗಳೂರು : ಈ ಬೇಸಿಗೆಯಲ್ಲಿ ಹಾಗೂ ಮುಂಬರುವ ದಿನಗಳಲ್ಲಿ ರಾಜ್ಯವು ಭಾರಿ ವಿದ್ಯುತ್ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದರು. ಈ ಮಧ್ಯೆ ನಾಗಝರಿ ಹಾಗೂ ರಾಯಚೂರು ವಿದ್ಯುತ್ ಘಟಕದಲ್ಲೂ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿತ್ತು.
ಈಗ ಪರಿಸ್ಥಿತಿ ಕೊಂಚ ಆಶಾದಾಯಕವಾಗಿದೆ. ಕಾಳಿ ಜಲ ವಿದ್ಯುತ್ ಯೋಜನೆಯ ನಾಗಝರಿ ವಿದ್ಯುದಾಗಾರದ ಮೊದಲ ಘಟಕದ ಸಾಮರ್ಥ್ಯವನ್ನು 135 ಮೆಗಾವ್ಯಾಟ್ನಿಂದ 150 ಮೆಗಾವ್ಯಾಟ್ಗೆ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ವಿದ್ಯುತ್ ಮಾರ್ಚ್ 21ರ ಬುಧವಾರ ರಾತ್ರಿ 11.43ರಿಂದ ರಾಜ್ಯ ವಿದ್ಯುತ್ ಜಾಲಕ್ಕೆ ಸೇರಿದೆ. ಇದರಿಂದಾಗಿ ಹೆಚ್ಚು ವಿದ್ಯುತ್ ಬಳಸುವ ಕಾಲದಲ್ಲಿ ರಾಜ್ಯ ಜಾಲಕ್ಕೆ 15 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ದೊರಕಲಿದೆ.
ಅಲ್ಲದೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಕೆಟ್ಟು ಹೋಗಿರುವ ಎರಡು ಘಟಕಗಳು ಇನ್ನು 15 ದಿನಗಳ ಅವಧಿಯಲ್ಲಿ ಮತ್ತೆ ಕಾರ್ಯಾರಂಭ ಮಾಡಲಿವೆ. ಈ ವಿಷಯವನ್ನು ವಿದ್ಯುತ್ ಖಾತೆ ಸಚಿವ ವೀರಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಇನ್ನು 10 ದಿನಗಳ ಅವಧಿಯಲ್ಲಿ ಈ ಘಟಕಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, 15 ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ. ನಾಗಝರಿಯ 3ನೇ ಘಟಕದ ನವೀಕರಣ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ಇದರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೂಡ 150 ಮೆಗಾವ್ಯಾಟ್ಗೆ ಹೆಚ್ಚಲಿದೆ. 3 ನೇ ಘಟಕದ ಸಾಮರ್ಥ್ಯ ಹಾಲಿ 135 ಮೆಗಾವ್ಯಾಟ್ಗಳಾಗಿದೆ.