ಮಂಗಳೂರು : ಕಾಳಿಕಾಂಬಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
ಮಂಗಳೂರು : ನಗರದ ರಥಭೀದಿಯಲ್ಲಿರುವ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾರ್ಚ್ 6, 8, ಮತ್ತು 11ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಮಾರ್ಚ್ 6ರಂದು ಸಂಜೆ ನಾಲ್ಕು ಗಂಟೆಗೆ ಹೊರೆ ಕಾಣಿಕೆಗಳ ಮೆರವಣಿಗೆ, ಮಾರ್ಚ್8ರಂದು, ವಿನಾಯಕ ಮತ್ತು ಕಾಳಿಕಾಂಬೆಯ ಬಿಂಬ ಪ್ರತಿಷ್ಠೆ ಹಾಗೂ ಮಾರ್ಚ್ 11ರಂದು ಮಹಾಕುಂಭಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 8ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಡಾ. ಡಿ. ವೀರೇಂದ್ರಹೆಗ್ಗಡೆಯವರು ಭಾಗವಹಿಸಲಿದ್ದು ಅರೆ ಮಾದನ ಹಳ್ಳಿಯ ವಿಶ್ವ ಕರ್ಮ ಗುರುಮಠದ ಗುರುಶಿವ ಸುಜ್ಞಾನ ಮೂರ್ತಿ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮೃತಿ ಕುಂಭ ಎಂಬ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಸಂಜೆ ಆರ್ಯಭಟ ಪ್ರಶಸ್ತಿ ವಿಜೇತ ಬಿ. ದೀಪ ಕುಮಾರ್ ಪುತ್ತೂರು ಅವರಿಂದ ಭರತ ನಾಟ್ಯವಿದೆ.
ಮಾರ್ಚ್ 11ರಂದು ನಡೆಯುವ ಕಾರ್ಯಕ್ರಮದಲ್ಲಿ ಕರಾವಳಿಯ 12 ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರನ್ನು ಸನ್ಮಾನಿಸಲಾಗುವುದು. ನಂತರ ಸನಾತನ ನಾಟ್ಯಾಲಯದ ಶಾರದಾ ಮಣಿ ಶೇಖರ್ ಶಿಶ್ಯವೃಂದದವರಿಂದ ಪುಣ್ಯ ಲಹರಿ- ಗೀತ ನೃತ್ಯ ರೂಪಕ ನಡೆಯಲಿದೆ.
(ಇನ್ಫೋ ವಾರ್ತೆ)