ಜೋಶಿ ಬದಲು ಹಿರ್ವಾನಿಗೆ ಬುಲಾವು : ಮುಟ್ಠಾಳತನದ ನಿರ್ಧಾರ
ಬೆಂಗಳೂರು : ತರಬೇತುದಾರರಿಗೆ ತರಬೇತಿ ನೀಡುವ ವಿಚಾರ ಸಂಕಿರಣದಲ್ಲಿ ಮಂಗಳವಾರ ಚರ್ಚೆಯ ದಿಕ್ಕೇ ಬದಲಾಯಿತು. ಫೆಬ್ರವರಿ 27ರಿಂದ ಆಸ್ಟ್ರೇಲಿಯಾ ವಿರುದ್ಧ ಪ್ರಾರಂಭವಾಗಲಿರುವ ಮೊದಲ ಟೆಸ್ಟ್ಗೆ ಆರಿಸಿದ ತಂಡದ ಬಗೆಗೇ ಮಾತುಗಳು. ಭಾರತದ ಮಾಜಿ ಸ್ಪಿನ್ ದ್ವಯರಾದ ಬಿಷನ್ ಸಿಂಗ್ ಬೇಡಿ ಮತ್ತು ಇ.ಎ.ಎಸ್.ಪ್ರಸನ್ನ, ಆಯ್ಕೆದಾರರು ಜೋಶಿ ಕೈಬಿಟ್ಟಿರುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಪತ್ರಿಕೆಯಾಂದಕ್ಕೆ ಹೇಳಿಕೆಗಳನ್ನು ಕೊಟ್ಟಿರುವ ಈ ಮಾಜಿ ಸ್ಪಿನ್ದ್ವಯರು ಇದೊಂದು ಕ್ರಿಕೆಟ್ ಆಯ್ಕೆ ಮಂಡಳಿಯ ಮೂರ್ಖ ನಿರ್ಧಾರ ಎಂದಿದ್ದಾರೆ. ಆರು ವರ್ಷಗಳಿಂದ ಯಾವ ಟೆಸ್ಟ್ ಕ್ರಿಕೆಟ್ಟನ್ನೂ ಆಡದ ಹಿರ್ವಾನಿಗೆ ದಿಢೀರ್ ಬುಲಾವು ಕೊಟ್ಟು, ಫಾರ್ಮ್ನಲ್ಲಿರುವ ಜೋಶಿಗೆ ಕೊಕ್ ಕೊಟ್ಟಿರುವುದು ಆಶ್ಚರ್ಯ ಅಷ್ಟೇ ಅಲ್ಲ , ಮುಟ್ಠಾಳತನದ ನಿರ್ಧಾರ ಎಂಬುದು ಬೇಡಿ ಆರೋಪ.
ನಾನೇನಾದರೂ ಆಯ್ಕೆ ಸಮಿತಿಯಲ್ಲಿದ್ದಿದ್ದರೆ ಇಬ್ಬರು ಆಫ್ ಸ್ಪಿನ್ನರ್ಗಳನ್ನು ಆರಿಸುತ್ತಿದ್ದೆ. ಜಿಂಬಾಬ್ವೆ ಸರಣಿಯಲ್ಲಿ ಯಶಸ್ವಿಯಾದ ಆಫ್ ಸ್ಪಿನ್ನರ್ ಶರಣ್ ದೀಪ್ ಈಗೆಲ್ಲಿ ? 1996ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ನಂತರ ಹಿರ್ವಾನಿ ಅಡ್ರಸ್ಗೇ ಇರಲಿಲ್ಲ. ಈಗ ದಿಢೀರ್ ಬುಲಾವು ಯಾಕೆ ? 1988-89ರಲ್ಲಿ ವಿಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಮಿಂಚಿದ್ದು ಬಿಟ್ಟರೆ ಹಿರ್ವಾನಿ ಆಡಿದ್ದು ಅಷ್ಟಕ್ಕಷ್ಟೇ ಇದೆ. ಜೋಶಿಯಂಥ ಫಾರ್ಮ್ನಲ್ಲಿರುವ ಆಟಗಾರನನ್ನು ಕೈಬಿಟ್ಟಿರುವುದು ಶುದ್ಧ ಮೂರ್ಖತನ ಎಂದು ಇ.ಎ.ಎಸ್ ಪ್ರಸನ್ನ ಹೇಳುವಾಗ ಕೋಪ ಉಕ್ಕಿಬರುತ್ತಿತ್ತು.
ಇದಷ್ಟೇ ಅಲ್ಲ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ವಿಕೆಟ್ ಕೀಪಿಂಗ್ ಮಾಡಿದ್ದರ ಜೊತೆಗೆ ಬಾಲಂಗೋಚಿ ಬ್ಯಾಟಿಂಗ್ ಸಾಮರ್ಥ್ಯ ಹೆಚ್ಚಿಸಿದ್ದ ವಿಜಯ್ ದಾಹಿಯಾ ಕೈಬಿಟ್ಟಿರುವ ಬಗೆಗೂ ಚಕಾರಗಳು ಕೇಳಿಬರುತ್ತಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...