ಕಾವೇರಿ ನೀರು : ಮಣಿಶಂಕರ ಅಯ್ಯರ್ ರಿಟ್ ಅರ್ಜಿ ವಜಾ
ನವದೆಹಲಿ : ಕಾವೇರಿ ನದಿಯಿಂದ ಮೆಟ್ಟೂರು ಜಲಾಶಯಕ್ಕೆ 1998ರ ಆಗಸ್ಟ್ನಿಂದೀಚೆಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ. ಕರ್ನಾಟಕವು ಕಾವೇರಿ ಮಧ್ಯಂತರ ತೀರ್ಪನ್ನು ಸರಿಯಾಗಿ ಜಾರಿ ಮಾಡದ ಕಾರಣ ತಮಿಳುನಾಡಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ನ್ಯಾಯಮೂರ್ತಿಗಳಾದ ಎಸ್.ಪಿ. ಭರೂಚಾ ಹಾಗೂ ವೈ.ಕೆ. ಸಬರ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಯನ್ನು ತಿರಸ್ಕರಿಸಿದೆ. ಕಾವೇರಿ ಜಲ ವಿವಾದವು ಅಂತಾರಾಜ್ಯ ವಿಷಯವಾಗಿದ್ದು, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರ ಅರ್ಜಿದಾರರಿಗೆ ಇಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಕಾವೇರಿ ಜಲ ನ್ಯಾಯಾಧೀಕರಣ ಮಂಡಳಿ ಅಥವಾ ಅದಕ್ಕೆ ತತ್ಸಮಾನವಾದ ಇನ್ನಿತರ ವೇದಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದು ಎಂದೂ ಸಲಹೆ ಮಾಡಿದೆ. ಅಯ್ಯರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಮೆಟ್ಟೂರು ಜಲಾಶಯಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ಹರಿದುಬಾರದ ಕಾರಣ ತಮಿಳುನಾಡಿನ ರೈತರ ಬೆಳೆಗೆ ನೀರು ಸೂಕ್ತ ಪ್ರಮಾಣದಲ್ಲಿ ದೊರಕದೆ, ಅಪಾರ ನಷ್ಟ ಅನುಭವಿಸುವಂತಾಗಿದೆ ಎಂದು ವಾದಿಸಿದ್ದರು.
ನ್ಯಾಯಮಂಡಳಿಯ ತೀರ್ಪಿನ ರೀತ್ಯ ಕುರುವೈ ಬೆಳೆ ಅವಧಿಯಲ್ಲಿ ಜಲಾಶಯಕ್ಕೆ 147 ಟಿ.ಎಂ.ಸಿ. ನೀರು ಬರಬೇಕು. ವರ್ಷದ ಇನ್ನುಳಿದ ಅವಧಿಯಲ್ಲಿ 58 ಟಿ.ಎಂ.ಸಿ. ನೀರು ಬಿಡಬೇಕು. ಆದರೆ, ಕರ್ನಾಟಕ ರಾಜ್ಯ ಸರಕಾರವು ಕಟ್ಟುನಿಟ್ಟಾಗಿ ಈ ಆದೇಶವನ್ನು ಪಾಲಿಸುತ್ತಿಲ್ಲ. ಕಳೆದ ಕುರವೈ ಬೆಳೆ ಅವಧಿಯಲ್ಲಿ ಅದು ಕೇವಲ 50 ಟಿ.ಎಂ.ಸಿ ನೀರು ಮಾತ್ರ ಬಿಟ್ಟಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದೂ ಆರೋಪಿಸಿದ್ದರು.