ಔದ್ಯೋಗಿಕ ನಗರಿ ಕಳಕೊಂಡಿರೋದು6 ಸಾವಿರ ಕೋಟಿ ರುಪಾಯಿ
ಗುಜರಾತ್ : ಒಂದೆಡೆ ಹೆಣಗಳ ಹುಡುಕಾಟ, ಇನ್ನೊಂದೆಡೆ ಬದುಕು ಸಾವಿನ ನಡುವೆ ಹೋರಾಡುತ್ತಿರುವ ಜೀವಗಳ ರಕ್ಷಣೆಗೆ ಒತ್ತು, ಮತ್ತೊಂದೆಡೆ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ನಲುಗಿ ಹೋಗಿರುವ ಗುಜರಾತ್ ಈಗ ನಂಬರ್ ಒನ್ ಔದ್ಯಮಿಕ ನಾಡಾಗಿ ಉಳಿದಿಲ್ಲ. ಒಟ್ಟಾರೆ 6 ಸಾವಿರ ಕೋಟಿ ರುಪಾಯಿ ಕಳಕೊಂಡು ಪಿಂಜರಾಪೋಲಾಗಿ ಬಿಟ್ಟಿದೆ.
ಗುಜರಾತ್ ಕೈಗಾರಿಕೆಗಳಿಗೆ ಹೆಸರುವಾಸಿಯಾದ ರಾಜ್ಯ. ಗಣರಾಜ್ಯೋತ್ಸವದ ಕಹಿ ಕೊಡುಗೆ ಭೂಕಂಪನ ಈ ರಾಜ್ಯದ ಕೈಗಾರಿಕಾ ಸಾರ್ವಭೌಮತ್ವಕ್ಕೇ ಕುತ್ತು ತಂದಿದೆ. ಮಾನವ ಸಂಪನ್ಮೂಲ ಕಳಕೊಂಡಿರುವ ಜತೆಗೆ ಸರ್ಕಾರ ಪ್ರತಿ ನಿತ್ಯ 500 ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿದೆ.
ಎಣ್ಣೆಬೀಜ, ವನಸ್ಪತಿಗಳ ತವರು ಎಂದೇ ಕರೆಸಿಕೊಳ್ಳುತ್ತಿದ್ದ ಗುಜರಾತ್, ಮಾರುಕಟ್ಟೆಯ ದೃಷ್ಟಿಯಲ್ಲಿ ಈ ಹೊತ್ತು ಏನೂ ಆಗಿ ಉಳಿದಿಲ್ಲ. ಔದ್ಯಮಿಕ ನಗರಿ ಎಂದೇ ಕರೆಸಿಕೊಳ್ಳುತ್ತಿದ್ದ ಅಹಮದಾಬಾದ್ನಲ್ಲಿ ಬದುಕುಳಿದ ಜನ ಚದುರಿ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ರಿಲಯನ್ಸ್, ಎಸ್ಸಾರ್ ಗುಜರಾತ್ ಮೊದಲಾದ ಹೆಸರಾಂತ ಕಂಪನಿಗಳು ಕಂಪನದ ತುಳಿತದಿಂದ ಬಚಾವಾಗಿದ್ದರೂ, ಕಂಪನಿಗಳ ಕೆಲಸಗಳು ಸ್ಥಗಿತಗೊಂಡಿವೆ.
ದೇಶದ ಹಲವಾರು ರಾಜ್ಯಗಳು ಒಂದು ರಾಜ್ಯವನ್ನು ಯಾವುದಾದರೊಂದು ದೈನಿಕ ಅಗತ್ಯ ವಸ್ತುವಿಗೆ ಅವಲಂಬಿಸುವುದು ಬಹುತೇಕ ಅನಿವಾರ್ಯ. ದಿನ ನಿತ್ಯ ಅಡುಗೆಗೆ ಉಪಯೋಗಿಸುವ ಕಡಲೆಕಾಯಿಎಣ್ಣೆ, ವನಸ್ಪತಿ ಉತ್ಪಾದನೆ ಹಿಂದೆಂದೂ ಕಾಣದಷ್ಟು ಕುಸಿಯುವ ಸಾಧ್ಯತೆಯಿದ್ದು, ಇದಕ್ಕೆ ಇಡೀ ದೇಶದ ಜನ ದಂಡ ತೆರಬೇಕಾಗುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಒಟ್ಟಿನಲ್ಲಿ ಔದ್ಯೋಗಿಕವಾಗಿ ನಾಗಾಲೋಟದಿಂದ ಓಡುತ್ತಿದ್ದ ಗುಜರಾತನ್ನು ಕಂಪನದ ಎಡರು ಮುಗ್ಗರಿಸಿ ಬೀಳುವಂತೆ ಮಾಡಿಬಿಟ್ಟಿದೆ ; ಎಲ್ಲದರಲ್ಲೂ.
(ಇನ್ಫೋ ವಾರ್ತೆ)