ಗುಂಡಿನ ದಾಳಿಯಲ್ಲಿ ಶಾಸಕ ಎಸ್.ಸಿ. ಮಾಳಗಿ ಪ್ರಾಣಾಪಾಯದಿಂದ ಪಾರು
ಬೆಳಗಾವಿ : ಸಂಯುಕ್ತ ಜನತಾದಳ ಶಾಸಕ ಎಸ್.ಸಿ. ಮಾಳಗಿಯವರ ಮೇಲೆ ಇಲ್ಲಿಗೆ 10 ಕಿಮೀ ದೂರದ ಭಟರಾಮನಹಟ್ಟಿಯಲ್ಲಿ ಕೆಲವು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲ್ಲಲು ಸೋಮವಾರ ರಾತ್ರಿ ಪ್ರಯತ್ನಿಸಿದ್ದಾರೆ. ಶಾಸಕರು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಳಗಿ, ಕೆಲವು ಗುರುತು ಸಿಗದ ದುಷ್ಕರ್ಮಿಗಳು ಗುಂಡು ಹಾರಿಸಿದರು, ಕೆಲವು ಗುಂಡುಗಳು ತಮ್ಮ ಕಾರಿನ ಕಿಟಕಿಯ ಸಮೀಪದಲ್ಲಿಯೇ ಹಾದು ಹೋದವು ಎಂದು ಹೇಳಿದರು. ಈ ಘಟನೆಯ ಹಿಂದೆ ರಾಜಕೀಯ ದ್ವೇಷವಿದೆ ಎಂದು ಹೇಳಿದ ಅವರು, ಆರು ತಿಂಗಳ ಹಿಂದೆಯೇ ಪ್ರಾಣಾಪಾಯದ ಶಂಕೆಯ ಹಿನ್ನೆಲೆಯಲ್ಲಿ ರಕ್ಷಣೆ ಕೋರಿದ್ದರೂ ಸರ್ಕಾರ ಈವರೆಗೂ ರಕ್ಷಣೆ ಒದಗಿಸಿಲ್ಲ ಎಂದು ಆಪಾದಿಸಿದರು.
ಸಿಂಧ್ಯಾ ಟೀಕೆ : ತಮ್ಮ ಪಕ್ಷದ ಶಾಸಕನ ಮೇಲೆ ನಡೆದಿರುವ ಕೊಲೆ ಪ್ರಯತ್ನದ ಬಗ್ಗೆ ದಳ ಸಂಸದೀಯ ಪಕ್ಷದ ನಾಯಕ ಪಿಜಿಆರ್ ಸಿಂಧ್ಯಾ ತಮ್ಮ ಆತಂಕ ವ್ಯಕ್ತಪಡಿಸಿ, ಬೆಂಗಳೂರಿನಲ್ಲಿ ಹೇಳಿಕೆಯಾಂದನ್ನು ಬಿಡುಗಡೆ ಮಾಡಿದ್ದಾರೆ. ಜೀವಭಯದಿಂದ 6 ತಿಂಗಳ ಹಿಂದೆಯೇ ರಕ್ಷಣೆ ಕೋರಿದ್ದರೂ ಒದಗಿಸದಿರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿರುವ ಅವರು. ಮಾಳಗಿಯವರಿಗೆ ತಕ್ಷಣದಿಂದಲೇ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಧಾನಪರಿಷತ್ತಿನ ಸಭಾಪತಿ ಎಂ.ವಿ. ವೆಂಕಟಪ್ಪ ಕೂಡ ಮಾಳಗಿಯವರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿದ್ದಾರೆ.
(ಯುಎನ್ಐ)