ಹಾರುಬೂದಿ ಹೊಂಡ ಕುಸಿತ : ತನಿಖೆ ಆರಂಭ
ರಾಯಚೂರು :ಡಿಸೆಂಬರ್ 4ರಂದು ಸಂಜೆ ಇಲ್ಲಿನ ಶಕ್ತಿ ನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೊದಲನೇ ಹಾರುಬೂದಿ ಹೊಂಡದ ಮಣ್ಣು ಕುಸಿದ ಬಗ್ಗೆ ಉನ್ನತ ಮಟ್ಟದ ಸಮಿತಿ ತನಿಖೆಯನ್ನು ಆರಂಭಿಸಿದೆ.
ಕರ್ನಾಟಕ ವಿದ್ಯುತ್ ನಿಗಮದ ನಿರ್ದೇಶನದಂತೆ ರಚಿಸಲಾಗಿರುವ ಎಸ್.ಎಂ. ಛಬ್ಬಿ, ಭೀಮರಾವ್ ಹಾಗೂ ಕೊಟ್ಟೂರು ಶೆಟ್ಟರ್ ಅವರನ್ನು ಒಳಗೊಂಡ ತ್ರಿಸದಸ್ಯ ತನಿಖಾ ದಳ ತನ್ನ ತನಿಖಾ ಕಾರ್ಯವನ್ನು ಆರಂಭಿಸಿದೆ. ಹಾರುಬೂದಿ ಹೊಂಡದ ಒಡ್ಡು ಒಡೆಯಲು ಕಾರಣವೇನು? ಅದರಿಂದ ಉಂಟಾಗಿರುವ ಹಾನಿಯ ಪ್ರಮಾಣ ಎಷ್ಟು, ಮುಂದೆ ಕೈಗೊಳ್ಳ ಬೇಕಾದ ಕ್ರಮಗಳೇನೂ ಎಂಬ ಬಗ್ಗೆ ಈ ಉನ್ನತ ಅಧಿಕಾರಿಗಳ ತಂಡ ಚರ್ಚಿಸಲಿದೆ ಎಂದು ಹಿರಿಯ ಅಧಿಕಾರಿ ಮೂಲಗಳು ತಿಳಿಸಿವೆ.
ತ್ರಿಸದಸ್ಯ ತಂಡದಲ್ಲಿರುವ ಛಬ್ಬಿ ಅವರು ವಿನ್ಯಾಸ ವಿಭಾಗದ ಮುಖ್ಯ ಅಭಿಯಂತರರಾಗಿದ್ದರೆ, ಭೀಮರಾವ್ ಕಲ್ಲಿದ್ದಲು ವಿಭಾಗದ ಅಧೀಕ್ಷಕ ಅಭಿಯಂತರರು. ಹಿರಿಯ ಸದಸ್ಯರಾದ ಐ.ಸಿ. ಕೊಟ್ಟೂರು ಶೆಟ್ಟರ್ ಅವರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಪ್ರಭಾರ ಪ್ರಧಾನ ವ್ಯವಸ್ಥಾಪಕ (ಶಾಖೋತ್ಪನ್ನ) ರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.