ಕಪಿಲ್ ದಾಖಲೆ ಮುರಿದ ಅಗರ್ಕರ್ :ಜಿಂಬಾಬ್ವೆಗೆ 302 ರನ್ ಗುರಿ
ರಾಜ್ಕೋಟ್: ಗಂಗೂಲಿ ತಂಡದಲ್ಲಿಲ್ಲ . ವಿಶ್ವಾಸಾರ್ಹ ದ್ರಾವಿಡ್ 6 ರನ್ನಿಗೆ ಔಟ್. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ 27 ಕ್ಕೆ ಔಟ್. ಆದರೂ, ಭಾರತ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 301 ರನ್ಗಳನ್ನು ಮುಟ್ಟಿತು. ಯುವ ಆಟಗಾರರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಹೀತ್ ಸ್ಟ್ರೀಕ್ ಭಾರತ ತಂಡವನ್ನು ಬ್ಯಾಟಿಂಗ್ಗೆ ಅಟ್ಟಿದರು. ಆದರೆ, ಕಡಿಮೆ ಮೊತ್ತಕ್ಕೆ ಎದುರಾಳಿಗಳನ್ನು ನಿಯಂತ್ರಿಸುವ ಅವರ ತಂತ್ರ ಕ್ಲಿಕ್ಕಾಗಲಿಲ್ಲ . ಅಗ್ರ ಕ್ರಮಾಂಕದ ಆಟಗಾರರು ಬೇಗನೆ ಪೆವಿಲಿಯನ್ಗೆ ಹಿಂತಿರುಗಿದಾಗ ಸ್ಟ್ರೀಕ್ ಮೋರೆಯಲ್ಲಿ ಮಿನುಗಿದ ನಗುವನ್ನು ಬದಾನಿ, ಸೋಧಿ ಹಾಗೂ ಅಗರ್ಕರ್ ಪೂರಾ ಅಳಿಸಿದರು.
ಗಂಗೂಲಿ ಸ್ಥಾನದಲ್ಲಿ ಆರಂಭಿಕನಾಗಿ ಕ್ರೀಸ್ಗಿಳಿದ ಶ್ರೀರಾಂ ಗಳಿಸಿದ್ದು 2 ರನ್ ಮಾತ್ರ. ತಂಡದ ನಾಯಕತ್ವ ವಹಿಸಿರುವ ದ್ರಾವಿಡ್ ಕೂಡ 6 ರನ್ಗೆ ವಿಕೆಟ್ ಚೆಲ್ಲಿದಾಗ ಶುರುವಾದ ಆತಂಕ ಸಚಿನ್ 38 ಚೆಂಡುಗಳಲ್ಲಿ 5 ಬೌಂಡರಿಗಳ ನೆರವಿನ 27 ರನ್ ಗಳಿಸಿದಾಗ ತಾರಕಕ್ಕೇರಿತು. ಆದರೆ, ಆ ಹಂತದಲ್ಲಿ ಬದಾನಿ ಅವರ ತಾಳ್ಮೆಯ ಆಟ ಹಾಗೂ 23 ಚೆಂಡುಗಳಲ್ಲಿ 29 ರನ್ ಚಚ್ಚಿದ ಯುವರಾಜ್ ಸಿಂಗ್ ಬಿರುಸಿನ ಆಟ ಭಾರತದ ಪರಿಸ್ಥಿತಿ ಸುಧಾರಿಸಿತು. ಜವಾಬ್ದಾರಿಯುತ ಆಟವಾಡಿದ ಬದಾನಿ 99 ಎಸೆತಗಳಲ್ಲಿ 77 ರನ್ ಗಳಿಸಿ, ಟೂರ್ನಿಯಲ್ಲಿ ಎರಡನೇ ಅರ್ಧಶತಕ ಗಳಿಸಿದರು. ಗಮನ ಸೆಳೆವ ಆಟವಾಡಿದ ರಿತೀಂಧರ್ ಸಿಂಗ್ ಸೋಧಿ ಅಜೇಯ 55 ರನ್ ಗಳಿಸಿದರು.
ಆದರೆ, ಇನಿಂಗ್ಸ್ ಕಳೆಗಟ್ಟಿದ್ದು ಅಗರ್ಕರ್ರ ಸ್ಫೋಟಕ ಆಟದಿಂದ. ಭಾರತದ ಮಟ್ಟಿಗೆ ಕಡಿಮೆ ಚೆಂಡುಗಳಲ್ಲಿ ಅರ್ಧ ಶತಕ ಬಾರಿಸಿದ ದಾಖಲೆಯನ್ನು ಅವರು ಬರೆದರು. ವಿಂಡೀಸ್ ವಿರುದ್ಧ 22 ಚೆಂಡುಗಳಲ್ಲಿ 50 ರನ್ (1983 ರಲ್ಲಿ ) ಗಳಿಸಿದ್ದ ಕಪಿಲ್ ದೇವ್ ದಾಖಲೆಯನ್ನು ಅಗರ್ಕರ್ ಮುರಿದರು. ಅವರು ಕೇವಲ 21 ಎಸೆತದಲ್ಲಿ ಅರ್ಧಶತಕ ದಾಟಿದರು. ಅಂತಿಮವಾಗಿ ಅಗರ್ಕರ್ 25 ಚೆಂಡುಗಳಲ್ಲಿ 4 ಸಿಕ್ಸರ್ ಹಾಗೂ 7 ಬೌಂಡರಿಯುಳ್ಳ ಅಜೇಯ 67 ರನ್ ಗಳಿಸಿದರು. ಜಿಂಬಾಬ್ವೆ ಪರ 3 ವಿಕೆಟ್ ಗಳಿಸಿದ ಎಂ.ಕಾಲಾ ಯಶಸ್ವಿ ಬೌಲರ್ ಎನಿಸಿದರು.
(ಇನ್ಫೋ ವಾರ್ತೆ)