‘ವೀರಪ್ಪನ್ ಶಿಕಾರಿಗೆ ಸರಕಾರಗಳು ಇನ್ನೂ ಇಸ್ರೋ ನೆರವು ಕೇಳಿಲ್ಲ’
ಬೆಂಗಳೂರು : ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕರ್ನಾಟಕ ಅಥವಾ ತಮಿಳುನಾಡು ಸರಕಾರ ಈವರೆಗೆ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಅಧ್ಯಕ್ಷ ಕಸ್ತೂರಿ ರಂಗನ್ ಗುರುವಾರ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ನಾವು ಈ ಬಗ್ಗೆ ಇನ್ನೂ ಚಿಂತಿಸಬೇಕು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಇಸ್ರೋ (ಐಎಸ್ಆರ್ಓ) ಯಾವ ಪಾತ್ರ ವಹಿಸಬೇಕೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದರು. ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಸಮಸ್ಯೆಯ ಬಗ್ಗೆ ವಿಶೇಷ ಚಿಂತನೆ ನಡೆಸಿಲ್ಲ. ಆದರೆ, ಈ ಸಮಸ್ಯೆಯನ್ನು ಪರಿಹರಿಸಲು ಇಸ್ರೋ ಗಮನ ಹರಿಸುತ್ತದೆ ಎಂದರು.
ಇಸ್ರೋ ಸಕಲ ಸಮಸ್ಯೆಗಳಿಗೂ ಪರಿಹಾರೋಪಾರಿಯೇನಲ್ಲ ಎಂದು ಹೇಳಿದ ಅವರು, ಈ ಸಮಸ್ಯೆಯ ಪರಿಹಾರಕ್ಕೆ ನೆರವಾಗುವಂತೆ ಇಸ್ರೋಗೆ ಕೇಳಿದರೆ, ಅದಕ್ಕೆ ಹೆಚ್ಚುವರಿ ಸೌಕರ್ಯ ಹಾಗೂ ಸಹಕಾರ ನೀಡಬೇಕಾಗುತ್ತದೆ ಎಂದರು. ಜೊತೆಗೆ ಕಾನನದಲ್ಲಿ ರಾತ್ರಿಯ ವೇಳೆ ವೀರಪ್ಪನ್ ಚಲನವಲನಗಳನ್ನು ಸ್ಯಾಟಲೈಟ್ ಮೂಲಕ ಪತ್ತೆ ಹಚ್ಚುವುದು ಸ್ಪಲ್ಪ ಕಷ್ಟಕರ ಕೆಲಸ ಎಂದೂ ಅವರು ಹೇಳಿದರು. (ಯು.ಎನ್.ಐ)