ಹೈಕೋರ್ಟ್ ಪೀಠ ಸ್ಥಾಪನೆಗೆ ಸರಕಾರ ಬದ್ಧ - ಚಂದ್ರೇಗೌಡ
ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸರಕಾರ ಬದ್ಧವಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಡಿ.ಬಿ. ಚಂದ್ರೇಗೌಡ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಜಗದೀಶ್ ಶಟ್ಟರ್ ಮತ್ತು ದಳ (ಯು) ನಾಯಕ ಪಿ.ಜಿ.ಆರ್. ಸಿಂಧ್ಯಾ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಚಿವರು, ಹೈಕೋರ್ಟ್ ಪೀಠ ಸ್ಥಾಪನೆ ಸಂಬಂಧ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ . ಹೊಸ ಮುಖ್ಯ ನ್ಯಾಯಾಧೀಶರೊಂದಿಗೆ ವಿಷಯವನ್ನು ಸರಕಾರ ಮತ್ತೆ ಪ್ರಸ್ತಾಪಿಸಲಿದೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ಪೀಠ ಸ್ಥಾಪಿಸುವ ವಿಷಯದಲ್ಲಿ ಸರಕಾರ ತನ್ನ ನಿಲುವನ್ನು ಬಹಿರಂಗಪಡಿಸಬೇಕು ಮತ್ತು ಮುಖ್ಯ ನ್ಯಾಯಾಧೀಶರ ಬಳಿಗೆ ರಾಜಕೀಯ ನಾಯಕರ ನಿಯೋಗ ತೆರಳಿ ಉತ್ತರ ಕರ್ನಾಟಕದಲ್ಲಿ ಪೀಠ ಸ್ಥಾಪನೆ ಅಗತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಶಟ್ಟರ್ ಮತ್ತು ಸಿಂಧ್ಯಾ ಒತ್ತಾಯಿಸಿದರು.
ಪರಿಷತ್ನಲ್ಲಿ ಜಿಲ್ಲಾಧಿಕಾರಿ : ವಿಧಾನಪರಿಷತ್ ಸದಸ್ಯರೊಬ್ಬರನ್ನು ಶಾಸಕ ಎಂದು ಪರಿಗಣಿಸದಿದ್ದುದರಿಂದ ಜಿಲ್ಲಾಧಿಕಾರಿಯಾಬ್ಬರು ಪರಿಷತ್ನಲ್ಲಿ ಕ್ಷಮೆ ಕೇಳಿದ ಐತಿಹಾಸಿಕ ಘಟನೆ ಮಂಗಳವಾರ ನಡೆಯಿತು.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕರೆದಿದ್ದ ಸಭೆಗೆ ತಮ್ಮನ್ನು ಆಹ್ವಾನಿಸದೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎಚ್. ಗೋಪಾಲಕೃಷ್ಣೇಗೌಡ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಜನತಾದಳದ ವಿಧಾನಪರಿಷತ್ ಸದಸ್ಯ ಎಸ್.ವಿ. ಮಂಜುನಾಥ್ ಪರಿಷತ್ನಲ್ಲಿ ದೂರಿದ್ದರು. ಜಿಲ್ಲಾಧಿಕಾರಿ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಲು ತೀರ್ಮಾನಿಸಲಾಗಿತ್ತು.
ಈ ಸಂಬಂಧ ನಿರ್ಣಯ ಅಂಗೀಕರಿಸಿದ ಪರಿಷತ್, ಸದನಕ್ಕೆ ಹಾಜರಾಗುವಂತೆ ಗೋಪಾಲಕೃಷ್ಣೇಗೌಡ ಅವರಿಗೆ ಸಮನ್ಸ್ ಜಾರಿ ಮಾಡಿತು. ಮಂಗಳವಾರ ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಡೇವಿಡ್ ಸಿಮೆಯೋನ್ ಅಧಿಕಾರಿಯನ್ನು ಹಾಜರುಪಡಿಸುವಂತೆ ಮಾರ್ಷಲ್ ಕೃಷ್ಣಮೂರ್ತಿ ಅವರಿಗೆ ಆದೇಶಿಸಿದರು. ಗೌಡ ಅವರನ್ನು ಸದನದಲ್ಲಿ ಹಾಜರುಪಡಿಸಿದಾಗ ಪೀಠದ ಮುಂದೆ ತಲೆಭಾಗಿ ಕೈಮುಗಿದು ಕ್ಷಮೆ ಯಾಚಿಸಿದರು. ನಂತರ ಸಭೆಯ ಸಲಹೆ ಕೇಳಿದ ಅಧ್ಯಕ್ಷರು, ಸದನವು ಕ್ಷಮೆಯನ್ನು ಒಪ್ಪಿಕೊಂಡಿದ್ದು ವಿಷಯವನ್ನು ಮುಕ್ತಾಯಗೊಳಿಸುವುದಾಗಿ ಹೇಳಿದರು.
ಐಎಎಸ್ ಲಾಬಿ : ಅಧಿಕಾರಿಯನ್ನು ಸದನಕ್ಕೆ ಹಾಜರುಪಡಿಸುವುದನ್ನು ತಪ್ಪಿಸಲು ಐಎಎಸ್ ಅಧಿಕಾರಿಗಳು ತೀವ್ರ ಲಾಬಿ ನಡೆಸಿದರೆಂದು ಕೆಲವು ಸದಸ್ಯರು ಮಾತನಾಡಿಕೊಳ್ಳುತ್ತಿದ್ದುದು ಕೇಳಿಬಂತು. ಈ ಅಪರೂಪದ ಘಳಿಗೆಯನ್ನು ಸೆರೆಹಿಡಿಯಲು ವಿಫಲರಾದ ಮಾಧ್ಯಮಗಳ ಛಾಯಾಚಿತ್ರಕಾರರು ತೀವ್ರ ನಿರಾಶೆ ಅನುಭವಿಸಿದರು. ಅವರೆಲ್ಲರೂ ಸದನ ತಲುಪುವ ಹೊತ್ತಿಗೆ ಗೌಡ ಅವರು ಸದನದಿಂದ ಹೊರನಡೆದಾಗಿತ್ತು. ಸದಸ್ಯರಲ್ಲದವರು ಬರುವ ಅಧ್ಯಕ್ಷ ಪೀಠದ ಎದುರಿನ ಬಾಗಿಲಿನಿಂದ ಗೌಡ ಅವರು ಬರುವ ವೇಳೆಯಲ್ಲಿ ಇನ್ನೊಂದು ಬಾಗಿಲಿನಿಂದ ಬರಲು ಛಾಯಾಗ್ರಾಹಕರಿಗೆ ವೇಳೆ ಸಾಕಾಗಲಿಲ್ಲ ಹಾಗಾಗಿ ಅವರ ಫೋಟೋ ಸೆರೆ ಹಿಡಿಯಲಾಗಲಿಲ್ಲ.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಗೌಡ, ತಾವು ಮಾಡಿದ ತಪ್ಪಿಗೆ ಷರತ್ತುರಹಿತ ಕ್ಷಮಾಪಣೆ ಕೇಳಿದ್ದಾಗಿ ತಿಳಿಸದರು. ತಮ್ಮನ್ನು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸಂಬಂಧ ಕರೆದಿದ್ದ ಸಭೆಗೆ ಆಹ್ವಾನಿಸದೆ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ನವೆಂಬರ್ 17ರಂದು ಪರಿಷತ್ ಸದಸ್ಯ ಮಂಜುನಾಥ್ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದರು. ಭಾರತದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.