ಕಣ್ಣೀರಲ್ಲ, ಇದು ಕಲ್ನೀರ ಕತೆ
ಹುಬ್ಬಳ್ಳಿ : ನಕ್ಕರೆ ಏನು ಮುತ್ತು ಉದರತ್ತಾ ? ಸ್ವಲ್ಪ ನಗಬಾರದೆ ಎಂದು ಸಿಡಕು ಮೂತಿಯ ಸಿದ್ಧಪ್ಪ ನಂತಹವರಿಗೆ ಆಗಾಗ ನೀವೂ ಹೇಳಿರಬಹುದು. ಅಜ್ಜಿ ಆಗಾಗ ಹೇಳುತ್ತಿದ್ದ ಕತೆಯಲ್ಲಿ ರಾಜಕುಮಾರಿ ನಕ್ಕಾಗ ಮುತ್ತು ಉದುರುತ್ತಿದ್ದವಂತೆ, ರಾಜಕುಮಾರ ಅತ್ತಾಗ ರತ್ನಗಳು ತೊಟ್ಟಿಕ್ಕುತ್ತಿದ್ದವಂತೆ. ನಾವಾಗ ಅಜ್ಜಿಯ ಕತೆ ಕೇಳಿ ಗಹಗಹಿಸಿ ನಕ್ಕಿದ್ದುಂಟು. ಆದರೆ, ಈ ಕಲಿಯುಗದಲ್ಲಿ ಏನಿಲ್ಲಾ ಆಶ್ಚರ್ಯಗಳು ನಡೆಯ ಬಹುದು ಎಂಬುದಕ್ಕೆ ಹಾವೇರಿಯ ಈ ಬಾಲಕಿಯ ಕತೆ ಕೇಳಿ.
ಈಕೆಯ ಹೆಸರು ಶೋಭಾ ಗುರುಪುತ್ರಯ್ಯ ಸುತ್ತೂರು ಮಠ . ಊರು , ಹಾವೇರಿ ತಾಲೂಕಿನ ಮರಡೂರು. ಈಕೆಗೀಗ 13 ವರ್ಷ. ಕಳೆದ ಮೂರು ತಿಂಗಳಿನಿಂದ ಈಕೆಯ ಎಡಗಣ್ಣಿನಿಂದ ಅರ್ಧಗಂಟೆ ಅಥವಾ ಒಂದು ಗಂಟೆಯ ಅವಧಿಯಲ್ಲಿ ಹುರಿಗಡಲೆ ಗಾತ್ರದ ಕಲ್ಲುಗಳು ಉದುರುತ್ತವೆ. ಎಲ್ಲರ ಕಣ್ಣಲ್ಲೂ ನೀರು ಬಂದರೆ, ಕೆಲವರ ಕಣ್ಣಲ್ಲಿ ರಕ್ತ ಬರಬಹುದು. ಆದರೆ ಶೋಭಾಳ ಕಣ್ಣಲ್ಲಿ ಕಲ್ಲುಗಳೇ ಉದುರುತ್ತವೆ.
ಬಾಲಕಿಯ ಈ ವಿಚಿತ್ರ ಕಣ್ಣೀರಿನ ಬಗ್ಗೆ ಎಲ್ಲ ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನಕ್ಕು ಸುಮ್ಮನಾಗಿದ್ದ ಶಾಸಕ ಬಸವರಾಜ ಶಿವಣ್ಣನವರ ಸೋಮವಾರ ಪತ್ರಕರ್ತರ ಜತೆಗೂಡಿ ಹಾವೇರಿಗೆ ಬಂದಿದ್ದ ಬಾಲಕಿಯನ್ನು ನೋಡ ಹೊರಟರು. ಬಾಲಕಿ ಶೋಭಾಳ ಕಣ್ಣಿಂದ ಕಲ್ಲುಗಳು ಉದುರಿದ್ದನ್ನು ಕಣ್ಣಾರೆ ಕಂಡು ದಿಗ್ಮೂಢರಾದರು.
ಪ್ರತಿ ಅರ್ಧಗಂಟೆಯ ಅವಧಿಯಲ್ಲಿ ತನ್ನ ಎಡಗಣ್ಣಿನ ಕೆಳರೆಪ್ಪೆಯಲ್ಲಿ ಕಣ್ಣೀರ ಹನಿ ಶೇಖರವಾಗಿ ಅದೇ ಕಲ್ಲಾಗಿ ಪರಿವರ್ತನೆಯಾಗಿ ಊದಿಕೊಳ್ಳುತ್ತದೆ. ರೆಪ್ಪೆ ಬಿಡಿಸಿದಾಗ ಕಲ್ಲು ಉದುರುತ್ತದೆ ಪುನಃ ಮತ್ತೆ ಮತ್ತೆ ಇದು ಪುನರಾವರ್ತನೆಯಾಗುತ್ತದೆ ಎನ್ನುತ್ತಾಳೆ ಶೋಭಾ.
ತನ್ನ ಕಣ್ಣಿನಿಂದ ಬಿದ್ದ ಕಲ್ಲುಗಳನ್ನು ಶೇಖರಿಸಿಟ್ಟಿರುವ ಶೋಭಾ ತನ್ನ ಕಣ್ಣೀರಿನ ಕತೆಯನ್ನು ವಿವರಿಸಿದಾಗ ಬಿಕ್ಕಿ ಬಿತ್ತಿ ಅತ್ತಳು. ಮಹೋಳ ಗ್ರಾಮದ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಶೋಭಾ ಎರಡು ತಿಂಗಳಿನಿಂದ ಶಾಲೆಗೂ ಹೋಗಿಲ್ಲವಂತೆ. ಮಲಗಿದಾಗ ಮಾತ್ರ ಈ ಶಿಲಾಬಾಷ್ಪದ ತೊಂದರೆ ಆಕೆಗಿರುವುದಿಲ್ಲವಂತೆ. ಕೆಳ ರೆಪ್ಪೆಯಲ್ಲಿ ಇರುವ ಕಲ್ಲು ಹೊರತೆಗೆದರೆ ಮಾತ್ರ ಮತ್ತೊಂದು ಹೊಸ ಕಲ್ಲು ಸೃಷ್ಟಿಯಾಗುತ್ತದೆ. ಕಲ್ಲು ತೆಗೆಯುವ ತನಕ ಕಣ್ಣುಗಳ ನೋವು ಕಾಡುತ್ತದೆ ಎಂದು ಕಣ್ಣಲ್ಲಿ ಕಲ್ಲು ಗರೆಯುತ್ತಾ ರೋಧಿಸುವ ಶೋಭಳ ಈ ಸಮಸ್ಯೆಗೆ ಪರಿಹಾರ ದೋರಕೀತೆ ನೋಡಬೇಕು.
ಶೋಭಳ ಕಲ್ನೀರಿನ ಕತೆ ಕೇಳಿದ ಸುತ್ತಮುತ್ತಲ ಗ್ರಾಮಸ್ಥರು ಕಣ್ಣಾರೆ ಕಲ್ನೀರ ಕಾಣಲು ಬರುತ್ತಿದ್ದಾರೆ. ಸುಡಿಸಿಕೊಳ್ಳುವುದು ಸುಲಭ, ಸುದ್ದಿ ಹೇಳುವುದು ಕಷ್ಟ ಎಂಬ ಗಾದೆಯಂತೆ ಕಣ್ಣು ನೋವಿನ ಜತೆಗೆ ಬಂದವರಿಗೆಲ್ಲಾ ವಿವರ ನೀಡಿ ಬಾಯಿ ನೋವಿನಿಂದಲೂ, ಮನಸ್ಸಿನ ನೋವಿನಿಂದಲೂ ಶೋಭಾ ಬಳಲುವಂತಾಗಿದೆ. ಸ್ಥಳೀಯ ವೈದ್ಯರಿಗೆ ಈ ಕಲ್ನೀರ ಹಿಂದಿನ ರಹಸ್ಯ ಭೇದಿಸಲಾಗಿಲ್ಲ. ಈಗಷ್ಟೇ ತಜ್ಞರ ಬಳಿಗೆ ಹೋಗುವ ಅವಕಾಶ ಶೋಭಾಳಿಗೆ ದೊರಕಿದೆ. ಕಲ್ಲು ಕರಗಿ ಕಣ್ಣೀರು ಆಗುತ್ತದೆಯೇ ನೋಡೋಣ.
( ಹುಬ್ಬಳ್ಳಿ ಪ್ರತಿನಿಧಿಯಿಂದ)