ನಾನು ಕ್ಷೇಮ ರಾಜ್ ; ರಾಜ್ ಜತೆಯೇ ವಾಪಸಾಗುವೆ : ಗೋಪಾಲ್
ಚೆನ್ನೈ : ವೀರಪ್ಪನ್ ಅಡಗುತಾಣದಿಂದ ಮತ್ತೊಂದು ವೀಡಿಯೋ ಕ್ಯಾಸೆಟ್ ಬಂದಿದೆ. ಈ ಕ್ಯಾಸೆಟ್ನಲ್ಲಿ ತಾವು ಸಂಪೂರ್ಣ ಕ್ಷೇಮದಿಂದಿರುವುದಾಗಿ ಡಾ. ರಾಜ್ಕುಮಾರ್ ತಿಳಿಸಿದ್ದಾರೆ.
ಈ ಬಾರಿ ಶತಾಯಗತಾಯ ರಾಜ್ಕುಮಾರ್ ಹಾಗೂ ಇತರ ಮೂವರು ಒತ್ತೆಯಾಳುಗಳನ್ನು ವೀರಪ್ಪನ್ ವಶದಿಂದ ಬಿಡಿಸಿಕೊಂಡೇ ನಾಡಿಗೆ ಮರಳುವುದಾಗಿ, ಮೂರನೇ ಬಾರಿಗೆ ಸಂಧಾನಕ್ಕಾಗಿ ಕಾಡಿಗೆ ತೆರಳಿರುವ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಅಧಿಕೃತ ಸಂಧಾನಕಾರ ನಕ್ಕೀರನ್ ಗೋಪಾಲ್ ಪುನರುಚ್ಚರಿಸಿದ್ದಾರೆ. ತಾವು ಕ್ಷೇಮದಿಂದಿದ್ದು, ಯಾವುದೇ ಕಾರಣಕ್ಕೂ ಅಶಾಂತಿಗೆ ಎಡೆ ಮಾಡಿಕೊಡದಂತೆ ಡಾ. ರಾಜ್ಕುಮಾರ್ ಅವರು ಕನ್ನಡ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿಗೆ ರಜನಿಕಾಂತ್: ಈ ಮಧ್ಯೆ ಡಾ. ರಾಜ್ಕುಮಾರ್ ಅವರು ತಮ್ಮ ಹಿಂದಿನ ಕ್ಯಾಸೆಟ್ನಲ್ಲಿ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಶನಿವಾರ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ. ರಜನಿಕಾಂತ್ ಅವರು ಸದಾಶಿವನಗರದ ಡಾ. ರಾಜ್ಕುಮಾರ್ ಅವರ ಮನೆಗೆ ಹೋಗಿ ರಾಜ್ ಕುಟುಂಬದವರನ್ನು ಸಂತೈಸಲಿದ್ದಾರೆ. ರಜನಿಕಾಂತ್ ಅವರು ಬೆಂಗಳೂರಿಗೆ ಬರುತ್ತಿರುವ ವಿಷಯವನ್ನು ರಾಜ್ ಕುಟುಂಬದವರಾಗಲೀ ಅಥವಾ ರಜನಿಕಾಂತ್ ಅವರ ಆಪ್ತ ಮೂಲಗಳಾಗಲೀ ಈವರೆಗೆ ದೃಢಪಡಿಸಿಲ್ಲ.