ಪರಿಸರ ಮಾಲಿನ್ಯದಿಂದ ತತ್ತರಿಸಿದ ಶಾಲಾ ಮಕ್ಕಳು ಕೋರ್ಟಿಗೆ
ಬೆಂಗಳೂರು : ನಗರದ ವಾಯು, ಶಬ್ದ ಮಾಲಿನ್ಯದಿಂದ ತತ್ತರಿಸಿ ಹೋಗಿರುವ ಬಿಷಪ್ ಕಾಟನ್ ಶಾಲೆಯ ಪ್ರಚಂಡ ಪುಟಾಣಿಗಳು ನ್ಯಾಯಭಿಕ್ಷೆ ಕೋರಿ ಈಗ ಕೋರ್ಟ್ನ ಮೆಟ್ಟಿಲು ಏರಿದ್ದಾರೆ.
ಈ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿದರೆ ಅತ್ಯಂತ ಚಿಕ್ಕ ವಯಸ್ಸಿನ ಬಾಲಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಇದಾಗುತ್ತದೆ. 14ರ ಹರೆಯದ ಪೋರ ಶುಶಾಂತ್ಚಾರಿ ಮತ್ತು ಆತನ ಗೆಳೆಯರು ಮಾಲಿನ್ಯದ ಮೇಲಿನ ತಮ್ಮ ದೂರನ್ನು ಕೋರ್ಟಿನ ಬಾಗಿಲಿಗೆ ಒಯ್ದಿದ್ದಾರೆ. ಈ ಸಂಬಂಧ ಹೈಕೋರ್ಟ್ನ ನ್ಯಾಯಮೂರ್ತಿ ಎಮ್. ಎಫ್. ಸಾಲ್ಡಾನಾ ಅವರಿಗೆ ಬರೆದಿರುವ ಪತ್ರದಲ್ಲಿ , ಸುಮಾರು 2 ಲಕ್ಷದಷ್ಟು ಮಕ್ಕಳಿಗೆ ತಮ್ಮ ಶಿಕ್ಷಕರು ಏನು ಹೇಳುತ್ತಿದ್ದಾರೆ ಎಂದು ಕೇಳಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಶಬ್ಧ ಮಾಲಿನ್ಯ ಸಹಿಸಿಕೊಳ್ಳಲು ಅಸಾಧ್ಯವಾಗಿದೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿರುವ ಶಬ್ಧ ಮಾಲಿನ್ಯದಿಂದ ಓದುವ ಮಾತು ಹಾಗಿರಲಿ, ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ಸುಮಾರು 60 ಸಾವಿರ ಆಟೋಗಳು ಸೇರಿದಂತೆ ನಗರದ ವಾಹನಗಳು ಮಾಡುವ ಶಬ್ಧ ಮತ್ತು ಯಾವುದೇ ಕಡಿವಾಣ ಇಲ್ಲದೆ ಅವು ಉಗುಳುವ ಹೊಗೆಯ ಬಗ್ಗೆಯೂ ಬಾಲಕರು ಗಮನ ಸೆಳೆದಿದ್ದಾರೆ.