ಎಸ್ಟಿಎಫ್ ದೌರ್ಜನ್ಯ : ವಿಚಾರಣೆ ಮುಂದುವರೆಸಲು ಹೈಕೋರ್ಟ್ ಸೂಚನೆ
ಬೆಂಗಳೂರು: ವೀರಪ್ಪನ್ ಕಾರ್ಯಾಚರಣೆಗಾಗಿ ನೇಮಕಗೊಂಡಿರುವ ಎಸ್ಟಿಎಫ್, ಕಾರ್ಯಾಚರಣೆ ಸಂದರ್ಭದಲ್ಲಿ ಗ್ರಾಮಸ್ಥರ ಮೇಲೆ ನಡೆಸಿದೆ ಎನ್ನಲಾದ ದೌರ್ಜನ್ಯದ ಕುರಿತು ವಿಚಾರಣೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೇಮಿಸಿರುವ ಸಮಿತಿಗೆ ವಿಚಾರಣೆ ಮುಂದುವರೆಸುವಂತೆ ಹೈಕೋರ್ಟ್ ಸೂಚಿಸಿದೆ.
ಮೈಸೂರಿನ ಎಸಿಪಿ ಮುತ್ತುರಾಯರ ರಿಟ್ ಅರ್ಜಿಯಿಂದಾಗಿ ಸಮಿತಿ ನಡೆಸುವ ವಿಚಾರಣೆಯನ್ನು ತಡೆಹಿಡಿಯಲಾಗಿತ್ತು . ತಡೆ ಆಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಸಮಿತಿಗೆ ವಿಚಾರಣೆ ಮುಂದುವರೆಸುವಂತೆ ತಿಳಿಸಿದೆ. ಆದರೆ ಎಸಿಪಿ ಸಲ್ಲಿಸಿದ ರಿಟ್ ಅರ್ಜಿಯ ಕುರಿತು ಅಂತಿಮ ತೀರ್ಪು ಹೊರಬೀಳುವವರೆಗೆ ಸಮಿತಿ ಸಲ್ಲಿಸುವ ವರದಿಯ ಬಗ್ಗೆ ಮಾನವ ಹಕ್ಕುಗಳ ಆಯೋಗ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್ ಹೇಳಿದೆ.
ವೀರಪ್ಪನ್ನನ್ನು ಹಿಡಿಯುವುದಕ್ಕೆ ಎಸ್ಟಿಎಫ್ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಗ್ರಾಮಸ್ಥರಿಗೆ ಹಾನಿ ಮಾಡಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವಂತೆ ವೀರಪ್ಪನ್ ಅಲ್ಲಿನವರ ಮೇಲೆ ಒತ್ತಡ ತಂದಿದ್ದಾನೆ. ಆದ್ದರಿಂದ ಮಾನವ ಹಕ್ಕುಗಳ ಆಯೋಗ ನೇಮಿಸಿದ ಸಮಿತಿ ನಡೆಸುತ್ತಿರುವ ವಿಚಾರಣೆಯನ್ನು ತಡೆಯಹಿಡಿಯಬೇಕು ಎಂದು ಎಸಿಪಿಯವರು ತಮ್ಮ ರಿಟ್ ಅರ್ಜಿಯಲ್ಲಿ ಕೋರ್ಟ್ನ್ನು ಕೋರಿದ್ದಾರೆ. ಎಸ್ಟಿಎಫ್ ಮೇಲಿರುವ ಹಿಂಸೆ ಮತ್ತು ದೌರ್ಜನ್ಯದ ಆರೋಪದ ಬಗ್ಗೆ ವಿಚಾರಣೆ ನಡೆಸುವಂತೆ ಮಾನವಹಕ್ಕುಗಳ ಆಯೋಗ ಎ.ಜೆ. ಸದಾಶಿವ ಮತ್ತು ಸಿ.ವಿ. ನರಸಿಂಹನ್ ಅವರನ್ನೊಳಗೊಂಡ ಸಮಿತಿ ರಚಿಸಿತ್ತು.