ಶ್ರೀಲಂಕಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ವ್ಯಕ್ತಿ 'ಖಾಕಿ' ಗುಂಡಿಗೆ ಬಲಿ
ಕೊಲಂಬೋ, ಏಪ್ರಿಲ್ 19: ಶ್ರೀಲಂಕಾದಲ್ಲಿ ಅರ್ಥಿಕ ಬಿಕ್ಕಟ್ಟು ಸೃಷ್ಟಿಯಾದ ಹಿನ್ನೆಲೆ ಸರ್ಕಾರದ ವಿರುದ್ಧ ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆ ಕಾವು ಪಡೆದುಕೊಂಡಿದೆ. ಇದರ ಮಧ್ಯೆ ಮಂಗಳವಾರ ಪೊಲೀಸರು ಸಿಡಿಸಿದ ಗುಂಡಿನ ಏಟಿಗೆ ಒಬ್ಬ ಪ್ರತಿಭಟನಾಕಾರ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ದೇಶದಲ್ಲಿ ಇಂಧನ ಕೊರತೆ, ಬೆಲೆಗಳ ಏರಿಕೆ ಹಾಗೂ ಆಸ್ಪತ್ರೆಯ ವೆಚ್ಚವೂ ದುಬಾರಿಯಾಗುತ್ತಿರುವ ಹಿನ್ನೆಲೆ ಸರ್ಕಾರದ ವಿರುದ್ಧ ರಂಬುಕ್ಕಾನದಲ್ಲಿ ಹೆದ್ದಾರಿಯನ್ನು ತಡೆಯುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಲಂಕಾದಲ್ಲಿ ಗಾಯಗೊಂಡ ಪ್ರತಿಭಟನಾಕಾರರನ್ನು ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಈ ಮಧ್ಯೆ ಪ್ರತಿಭಟನಾಕಾರರು ಗಾಯಗೊಳ್ಳಲು ಪೊಲೀಸರು ಹಾರಿಸಿದ ಗುಂಡು ಕಾರಣ ಎಂದು ಪ್ರತಿಭಟನಾಕರರೊಬ್ಬರು ದೂಷಿಸಿದ್ದಾರೆ.


ಶ್ರೀಲಂಕಾದಲ್ಲಿ ತೀವ್ರತೆ ಪಡೆದುಕೊಂಡ ಹೋರಾಟದ ಹಾದಿ
ಪೊಲೀಸರು ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ರಂಬುಕ್ಕಾನ ಪೊಲೀಸ್ ಠಾಣೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಇದೆಂಥಾ ದುಸ್ಥಿತಿ?:
ಕಳೆದ 1948ರ ಸ್ವಾತಂತ್ರ್ಯ ನಂತರದಲ್ಲಿ ಶ್ರೀಲಂಕಾ ಹಿಂದೆಂದೂ ಇಂಥ ದುಸ್ಥಿತಿಯನ್ನು ಎದುರಿಸಿರಲಿಲ್ಲ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಇಂಧನ ಕೊರತೆ ಸೃಷ್ಟಿಯಾಗಿದೆ. ಅಗತ್ಯ ವಸ್ತುಗಳ ಕೊರತೆಯು ಜನರನ್ನು ತತ್ತರಿಸುವಂತೆ ಮಾಡಿದ್ದು, ಪ್ರತಿನಿತ್ಯ ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ.

ಶ್ರೀಲಂಕಾದಲ್ಲಿ ಹೇಗಿದೆ ಸರ್ಕಾರದ ವಿರುದ್ಧ ಆಂದೋಲನ
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೊಂದಿಗೆ ತುರ್ತಾಗಿ ಅಗತ್ಯವಿರುವ ಬೇಲ್ಔಟ್ ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ದ್ವೀಪ ರಾಷ್ಟ್ರವು ಬೃಹತ್ ಆಂದೋಲನವನ್ನು ನಡೆಸುತ್ತಿದೆ. ಕೊಲಂಬೊದಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಕಳೆದ ಒಂದು ವಾರದಿಂದಲೂ ಸಮುದ್ರದ ಮುಂಭಾಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಾಗುತ್ತಿದೆ. ದೇಶದ ಪ್ರಮುಖ ಪೆಟ್ರೋಲ್ ಚಿಲ್ಲರೆ ವ್ಯಾಪಾರದಲ್ಲಿ ಸುಮಾರು ಶೇ.65ರಷ್ಟು ಬೆಲೆಗಳು ಹೆಚ್ಚಳವಾಗಿವೆ.
ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಸಾವಿರಾರು ವಾಹನ ಚಾಲಕರು ಈ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಟೈರ್ಗಳನ್ನು ಸುಡುವ ಮೂಲಕ ರಸ್ತೆ ತಡೆ ನಡೆಸಿದರು. ಹಿಂದಿನ ದಿನ ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಔಷಧ ಮತ್ತು ಉಪಕರಣಗಳ ಕೊರತೆಯಿದೆ ಎಂದು ಪ್ರತಿಭಟನೆ ನಡೆಸಿದರು.

ಸಂಪುಟ ರಚಿಸಿದ ರಾಜಪಕ್ಸೆ
ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹ ಹೆಚ್ಚುತ್ತಿರುವುದರ ಮಧ್ಯೆ ಸೋಮವಾರ ಅಧ್ಯಕ್ಷ ರಾಜಪಕ್ಸೆ ಅವರು ಹೊಸ 17 ಸದಸ್ಯರ ಕ್ಯಾಬಿನೆಟ್ ಅನ್ನು ನೇಮಿಸಿದರು. ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ಹಾಗೂ ನಿಕಟ ಸಂಬಂಧಿಗಳನ್ನು ಹೊರತುಪಡಿಸಲಾಗಿದೆ. ಅಂದರೆ ಕುಟುಂಬದ ಹಿರಿಯ ಸದಸ್ಯ ಚಮಲ್ ರಾಜಪಕ್ಸೆ, ಮಹಿಂದಾ ಅವರ ಪುತ್ರ ನಮಲ್ ರಾಜಪಕ್ಸೆ, ಇಬ್ಬರೂ ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯ ಸಚಿವರಾಗಿದ್ದ ಸೋದರಳಿಯ ಶಶೀಂದ್ರ ಅವರಿಗೆ ಈ ಸಂಪುಟದಲ್ಲಿ ಯಾವುದೇ ಸ್ಥಾನ ನೀಡಿಲ್ಲ.

ತನ್ನ ತಪ್ಪು ಒಪ್ಪಿಕೊಂಡ ಶ್ರೀಲಂಕಾ ಅಧ್ಯಕ್ಷ
ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ, 2020 ರಲ್ಲಿ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವುದು ಮತ್ತು IMF ಬೇಲ್ಔಟ್ಗೆ ಪ್ರಯತ್ನಿಸದಂತಹ ತಪ್ಪುಗಳು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು. ಅವರ ಸರ್ಕಾರವು ಬಹಳ ಹಿಂದೆಯೇ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬೇಲ್ಔಟ್ಗೆ ಹೋಗಬೇಕಿತ್ತು. ಹೋಗದಿರುವುದೇ ತಪ್ಪಾಯಿತು ಎಂದು ಅವರು ಹೇಳಿದರು.
ಹೊಸದಾಗಿ ಸೇರ್ಪಡೆಗೊಂಡ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಮಾತನಾಡಿದ ಅಧ್ಯಕ್ಷ ರಾಜಪಕ್ಸೆ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವ ನಿರ್ಧಾರ "ತಪ್ಪು" ಎಂದು ಕರೆದರು. ಅದನ್ನು ಈಗ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು. 2020ರ ಮಧ್ಯದಲ್ಲಿ ರಾಜಪಕ್ಸೆಯವರು ಸಾವಯವ ಗೊಬ್ಬರದೊಂದಿಗೆ ಹಸಿರು ಕೃಷಿ ನೀತಿಗೆ ತಿರುಗುವ ಸಲುವಾಗಿ ರಸಗೊಬ್ಬರ ಆಮದುಗಳ ಬಳಕೆಯನ್ನು ನಿಷೇಧಿಸಿದರು.












Click it and Unblock the Notifications