ಝೆನ್ ಕಥೆ: ಉದ್ಯಾನ ಅಲಂಕರಿಸುವುದು ಹೀಗೆ, ಮಾಸ್ಟರ್ ಮಾಡಿದ ಪಾಠ
ಒಬ್ಬ ಯುವ ಸನ್ಯಾಸಿಗೆ ಹೂ, ಗಿಡ ಮರ ಬಳ್ಳಿ ಪರಿಸರ ಬಗ್ಗೆ ಅಪಾರ ಪ್ರೀತಿಯಿತ್ತು. ಹಾಗಾಗಿ ಆತನಿಗೆ ದೇವಾಲಯದ ಉದ್ಯಾನವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು. ಈ ದೇವಾಲಯದ ಪಕ್ಕದಲ್ಲಿಯೇ ಇನ್ನೊಂದು ಪುಟ್ಟದಾದ ಝೆನ್ ವಿಹಾರವಿತ್ತು. ಅಲ್ಲಿ ವೃದ್ಧ ಝೆನ್ ಮಾಸ್ಟರ್ ವಾಸಿಸುತ್ತಿದ್ದರು.
ಒಮ್ಮೆ ದೇವಾಲಯಕ್ಕೆ ವಿಶೇಷ ಅತಿಥಿಗಳು ಬರುವ ಕಾರ್ಯಕ್ರಮವಿತ್ತು. ಹೀಗಾಗಿ ಯುವ ಸನ್ಯಾಸಿ ಉದ್ಯಾನದ ಬಗ್ಗೆ ಹೆಚ್ಚಿನ ಗಮನ ಹರಿಸಿದ. ಇಡೀ ಉದ್ಯಾನದಲ್ಲಿನ ಎಲ್ಲ ಕಸಗುಡಿಸಿ ಸ್ವಚ್ಛ ಮಾಡಿದ. ಬಾಡಿ ಹೋಗಿದ್ದ ಹೂ ಗಿಡಗಳನ್ನು ಕಿತ್ತುಹಾಕಿದ. ಬಳ್ಳಿಗಳು ಅಂದವಾಗಿ ಕಾಣಿಸುವಂತೆ ವ್ಯವಸ್ಥೆ ಮಾಡಿದೆ. ಶರತ್ಕಾಲದ ಮರದ ಎಲೆಗಳನ್ನು ನೆಲದ ಮೇಲೆ ಮಟ್ಟಸವಾಗಿ ಹಾಸಿದ. ಯುವ ಸನ್ಯಾಸಿಯ ಈ ಕೆಲಸಗಳನ್ನು ಗೋಡೆಯಾಚೆ ನಿಂತಿದ್ದ ವೃದ್ಧ ಝೆನ್ ಮಾಸ್ಟರ್ ನೋಡುತ್ತಿದ್ದ.
ತನ್ನ ಎಲ್ಲ ಕೆಲಸ ಮುಗಿದ ಬಳಿಕ ಯುವ ಸನ್ಯಾಸಿ ಒಮ್ಮೆ ಹಿಂತಿರುಗಿ ನೋಡಿ ತನ್ನ ಪರಿಶ್ರಮದ ಬಗ್ಗೆ ತೃಪ್ತಿಯಿಂದ ಕಣ್ಣು ಹಾಯಿಸಿದ.

"ಉದ್ಯಾನ ಎಷ್ಟು ಸುಂದರವಾಗಿ ಕಾಣಸುತ್ತಿದೆಯಲ್ಲವೇ?" ಎಂದು ಗೋಡೆಯ ಆಚೆ ನಿಂತಿದ್ದ ಮಾಸ್ಟರ್ನನ್ನು ಕೇಳಿದ.
"ಹೌದು ಬಹಳ ಸುಂದರವಾಗಿದೆ. ಆದರೂ ಏನೋ ಕೊರತೆ ಎನಿಸುತ್ತಾ ಇದೆ. ಗೋಡೆಯಾಚೆ ನನ್ನನ್ನು ಎತ್ತಿಕೋ, ನಾನು ಸರಿ ಮಾಡುತ್ತೇನೆ" ಎಂದ ಮಾಸ್ಟರ್.
ಅದರಂತೆ ಯುವ ಸನ್ಯಾಸಿ, ವೃದ್ಧ ಮಾಸ್ಟರ್ನನ್ನು ದೇವಾಲಯದ ಕಡೆಗಿನ ಉದ್ಯಾನದ ಕಡೆ ಎತ್ತಿ ಒಳಗೆ ಇಳಿಸಿಕೊಂಡ.
ಉದ್ಯಾನದ ಒಳಗೆ ನಿಧಾನವಾಗಿ ಬಂದ ಮಾಸ್ಟರ್ ಸೀದಾ ಉದ್ಯಾನದ ನಡುವೆ ಇದ್ದ ಮರದ ಬಳಿ ಬಂದು, ಅದರ ರೆಂಬೆಯೊಂದನ್ನು ಹಿಡಿದು ಜೋರಾಗಿ ಅಲ್ಲಾಡಿಸಿದ. ಮರದಲ್ಲಿದ್ದ ಹಣ್ಣಾದ ಎಲೆಗಳೆಲ್ಲ ನೆಲದ ಮೇಲೆ ಉದುರಿ ಬಿದ್ದವು. "ಹಾಂ, ಈಗ ಸರಿಯಾಯಿತು" ಎನ್ನುತ್ತಾ ಮಾಸ್ಟರ್ ಗೋಡೆ ಜಿಗಿದು ತನ್ನ ಆಶ್ರಮದ ಕಡೆ ಹೊರಟ.
(ಸಂಗ್ರಹ)












Click it and Unblock the Notifications