ಬುದ್ಧನನ್ನು ಸುಟ್ಟ ಬೆಂಕಿಯೂ ಚಳಿ ಕಾಯಿಸುತ್ತದೆ!
ಸುಪ್ರಸಿದ್ಧ ಝೆನ್ ಗುರು ಇಕ್ಕಿಯು ಚಳಿಗಾಲದ ಒಂದು ಸಂಜೆ ಎಲ್ಲಿಗೋ ಪ್ರಯಾಣಿಸುತ್ತಿದ್ದ. ಹಾಗೆ ನಡೆಯುತ್ತಾ ನಡೆಯುತ್ತಾ ರಾತ್ರಿಯಾಯ್ತು. ರಾತ್ರಿಯಾದಂತೆಲ್ಲ ಚಳಿಯೂ ಹೆಚ್ಚಾಯಿತು.
ದಾರಿ ಮಧ್ಯ ಬುದ್ಧ ಮಂದಿರವೊಂದು ಸಿಕ್ಕಿತು. ಚಳಿಯಿಂದ ನಡುಗುತ್ತಿದ್ದ ಇಕ್ಕಿಯು ಅದರ ಬಾಗಿಲು ಬಡಿದ. ಬಾಗಿಲು ತೆರೆದ ಮಂದಿರದ ಪೂಜಾರಿ ಬಳಿ ಅಲ್ಲಿಯೇ ಪಡಸಾಲೆಯಲ್ಲಿ ತನಗೆ ಜಾಗ ಕೊಡುವಂತೆ ಮಲಗಲು ಕೇಳಿದ. ಅದಕ್ಕೆ ಒಪ್ಪಿದ ಪೂಜಾರಿ ಇಕ್ಕಿಯುಗೆ ಒಂದು ಚಾಪೆ ನೀಡಿದ.
ಜ್ಞಾನೋದಯವಾಗುವುದು ಎಂದರೆ ಏನು ಗೊತ್ತೇ?
ನಡು ರಾತ್ರಿಯ ವೇಳೆ ಕಿಟಕಿ ಗಾಜಿನ ಮೂಲಕ ಬೆಂಕಿ ಜ್ವಾಲೆ ಪ್ರತಿಫಲಿಸುವುದು ಕಂಡಿತು. ನಿದ್ದೆಗಣ್ಣಿನಲ್ಲಿದ್ದ ಪೂಜಾರಿ ಬೆಚ್ಚಿಬಿದ್ದ. ಕೂಡಲೇ ಎದ್ದ ಪೂಜಾರಿ ಗಾಬರಿಯಿಂದ ಹೊರಗೆ ಬಂದ. ನೋಡಿದರೆ ಇಕ್ಕಿಯು ಮಂದಿರದ ಅಂಗಳದಲ್ಲಿ ಬುದ್ಧನ ಪ್ರತಿಮೆಯ ಕೈಕಾಲು ಮುರಿದು ಅಗ್ಗಿಷ್ಟಿಕೆ ಹೊತ್ತಿಸಿ ಅಂಗೈ ಉಜ್ಜುತ್ತಾ ಚಳಿ ಕಾಯಿಸುತ್ತಾ ಕುಳಿತಿದ್ದ! ಹೌಹಾರಿದ ಪೂಜಾರಿ ಅದರ ಬಳಿ ದೌಡಾಯಿಸುವ ಹೊತ್ತಿಗೆ ಬುದ್ಧನ ಪ್ರತಿಮೆಯ ತಲೆಯ ಭಾಗ ಬೆಂಕಿಯೊಳಗೆ ಇಳಿದು ಸುಟ್ಟು ಕರಗಿ ಹೋಗುತ್ತಿತ್ತು.
"ಮೂರ್ಖ! ಇದೇನು ಮಾಡ್ತಿದ್ದೀಯ! ಬುದ್ಧ ದೇವನನ್ನು ಬೆಂಕಿಗೆ ಹಾಕಿ ಚಳಿ ಕಾಯಿಸಿಕೊಳ್ತಿದ್ದೀಯಲ್ಲ!" ಎಂದು ಪೂಜಾರಿ ಕೋಪಾವೇಶದಿಂದ ಕಿರುಚಾಡಿದ.
ಕಾಡಿನಲ್ಲಿ ಎದುರಾದ ಹುಲಿಯ ಕಣ್ಣೊಳಗೆ ಕಣ್ಣಿಟ್ಟು ನೋಡಿದಾಗ...
ಅಷ್ಟಾದರೂ ಇಕ್ಕಿಯು ಮುಖದಲ್ಲಿ ಮಂದಹಾಸ ಕೊಂಚವೂ ಮಾಸಲಿಲ್ಲ. ಸುಮ್ಮನೆ ಎದ್ದು ಒಂದು ಕೋಲನ್ನು ಹುಡುಕಿಕೊಂಡು ತಂದ. ಆ ವೇಳೆಗಾಗಲೇ ಪ್ರತಿಮೆ ಬಹುತೇಕ ಉರಿದು ಅಗ್ಗಿಷ್ಟಿಕೆಯಿಂದ ಏಳುತ್ತಿದ್ದ ಜ್ವಾಲೆಗಳು ಕೂಡ ತಗ್ಗುತ್ತ ಬಂದಿದ್ದವು. ಇಕ್ಕಿಯು ಕೋಲನ್ನು ಅಗ್ಗಿಷ್ಟಿಕೆಗೆ ಹಾಕಿ ಏನನ್ನೋ ಕೆದಕತೊಡಗಿದ.
ಆ ಪೂಜಾರಿಯ ಪಿತ್ತ ಮೊದಲೇ ನೆತ್ತಿಗೇರಿತ್ತು. ಇಕ್ಕಿಯು ಹುಡುಕಾಟ ಕಂಡು ಮತ್ತಷ್ಟು ಸಿಟ್ಟು ಬಂತು. "ನಿನಗೆ ತಲೆ ಸರಿ ಇಲ್ಲವೇ? ನಾನು ಕೇಳಿದ್ದೇನು, ನೀನು ಮಾಡ್ತಿರೋದೇನು?" ಎಂದು ಕೂಗಾಡಿದ.
ಇಕ್ಕಿಯು ಅಷ್ಟೇ ಸಾವಧಾನದಿಂದ "ನಾನು ಬುದ್ಧನ ಮೂಳೆಗಳನ್ನು ಹುಡುಕುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ.
ಯುದ್ಧ ಮಾಡುವ ಕಲೆ ಕಲಿಯಲು ಎಷ್ಟು ಸಮಯ ಬೇಕು?
"ನಿನಗೆ ಪೂರ್ತಿ ಹುಚ್ಚು! ಅದೊಂದು ಮರದ ಪ್ರತಿಮೆ ಅಷ್ಟೇ. ಮೂಳೆ ಎಲ್ಲಿಂದ ಬರುತ್ತದೆ?" ಎಂದು ಕೋಪದಲ್ಲೇ ನಕ್ಕುಬಿಟ್ಟ ಪೂಜಾರಿ.
"ಓಹೋ! ಹಾಗಾದರೆ ಬುದ್ಧ ಭಗವಾನನನ್ನು ಸುಟ್ಟುಬಿಟ್ಟೆ ಅಂತ ಯಾಕೆ ಬೊಬ್ಬೆ ಹಾಕ್ತಿದ್ದೀಯ? ನಾನು ಸುಟ್ಟಿದ್ದು ಪ್ರತಿಮೆಯನ್ನಷ್ಟೇ. ರಾತ್ರಿ ಕಳೆಯುವುದಕ್ಕೆ ಇನ್ನೂ ತುಂಬಾ ಸಮಯವಿದೆ. ಚಳಿ ಮತ್ತೂ ಜಾಸ್ತಿ ಆಗುತ್ತಲೇ ಹೋಗುತ್ತದೆ. ನನ್ನೊಳಗಿನ ಜೀವಂತ ಬುದ್ಧನನ್ನು ಉಳಿಸಬೇಕೆಮದರೆ, ಅಗೋ ಅಲ್ಲಿ ಇನ್ನೆರಡು ಪ್ರತಿಮೆಗಳಿವೆಯಲ್ಲ, ಅವನ್ನು ತೆಗೆದುಕೊಂಡು ಬಾ... ಬೆಳಗಾಗುವ ತನಕ ಅಗ್ಗಿಷ್ಟಿಕೆ ಉರಿಸಬೇಕು" ಅಂದ ಇಕ್ಕಿಯು.