ಝೆನ್ ಕಥೆ: ಶವಪೆಟ್ಟಿಗೆ ನಿನ್ನ ಮಕ್ಕಳಿಗೂ ಬೇಕಾಗಬಹುದು!
ಒಂದು ಊರಿನ ರೈತನೊಬ್ಬ ಕಷ್ಟಪಟ್ಟು ದುಡಿದು ಹೊಲವನ್ನು ಸಮೃದ್ಧಗೊಳಿಸಿದ್ದ. ಕಾಲ ಉರುಳಿದಂತೆ ರೈತನಿಗೆ ವಯಸ್ಸಾಯಿತು. ಆತನಿಗೆ ಹಿಂದಿನಂತೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಯಾವಾಗಲೂ ಮನೆಯ ಅಂಗಳದಲ್ಲಿಯೇ ಸುಮ್ಮನೆ ಕುಳಿತುಕೊಂಡು ಕಾಲ ಕಳೆಯುತ್ತಿದ್ದ. ಅವನ ಮಗ ಇನ್ನೂ ಹೊಲದಲ್ಲಿ ದುಡಿಯುತ್ತಿದ್ದ. ಮಗ ನೋಡಿದಾಗಲೆಲ್ಲಾ ತಂದೆ ಮನೆಯ ಮುಂದೆ ಕುಳಿತುಕೊಂಡಿರುವುದು ಕಾಣುತ್ತಿತ್ತು.
'ಇನ್ನು ಮುಂದೆ ಅಪ್ಪ ಯಾವ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ' ಎಂದು ಮಗ ಮನದಲ್ಲಿಯೇ ಅಂದುಕೊಂಡ. ಇನ್ನು ಅವರಿಂದ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ. ತಂದೆಯನ್ನು ಹೀಗೆ ನೋಡಿ ನೋಡಿ ಅವನಲ್ಲಿ ಹತಾಶೆ ಮೂಡಿತು. ಒಂದು ದಿನ ಮರದ ಶವಪೆಟ್ಟಿಗೆಯನ್ನು ಸಿದ್ಧಪಡಿಸಿದ. ಅದನ್ನು ಎಳೆದುಕೊಂಡು ಅಂಗಳಕ್ಕೆ ತಂದು, ಅದರೊಳಗೆ ಮಲಗಿಕೊಳ್ಳಲು ತನ್ನ ತಂದೆಗೆ ಹೇಳಿದ.
ಒಂದೂ ಮಾತು ಆಡದೆ ತಂದೆ ಶವಪೆಟ್ಟಿಗೆಯೊಳಗೆ ಮಲಗಿಕೊಂಡ. ಅದರ ಮುಚ್ಚಳ ಮುಚ್ಚಿದ ಬಳಿಕ ಮಗ ಶವಪೆಟ್ಟಿಗೆಯನ್ನು ಎಳೆದುಕೊಂಡು ಹೋಗತೊಡಗಿದ. ಹೊಲದ ಅಂಚಿನಲ್ಲಿರುವ ಬೃಹತ್ ಪ್ರಪಾತದ ಸಮೀಪ ತಂದ. ಆತ ಪ್ರಪಾತವನ್ನು ಸಮೀಪಿಸುತ್ತಿದ್ದಂತೆಯೇ ಶವಪೆಟ್ಟಿಗೆ ಒಳಗಿನಿಂದ ಮುಚ್ಚಳದ ಮೇಲೆ ಸಣ್ಣನೆ ತಟ್ಟಿದ ಸದ್ದು ಕೇಳಿಸಿತು. ಮಗ ಎಳೆಯುವುದನ್ನು ನಿಲ್ಲಿಸಿ ಮುಚ್ಚಳ ತೆಗೆದ.

ಒಳಗೆ ತಂದೆ ಪ್ರಶಾಂತವಾಗಿ ಮಲಗಿದ್ದ. ಮಗನ ಮುಖವನ್ನು ನೋಡಿ, 'ಮಗನೇ ನೀನು ನನ್ನನ್ನು ಪ್ರಪಾತದಿಂದ ಕೆಳಕ್ಕೆ ಎಸೆಯುತ್ತೀಯ ಎನ್ನುವುದು ನನಗೆ ಗೊತ್ತಿದೆ. ನಿನಗೆ ಒಂದು ಸಲಹೆ ನೀಡಬಹುದೇ?' ಎಂದು ಕೇಳಿದ.
'ಏನದು?' ಎಂದು ಮಗ ಕೇಳಿದ.
'ನನ್ನನ್ನು ಪ್ರಪಾತದಿಂದ ಕೆಳಕ್ಕೆ ಎಸೆಯಬೇಕು ಎಂದು ನೀನು ಬಯಸಿದ್ದರೆ ಎಸೆದುಬಿಡು. ಆದರೆ ಈ ಒಳ್ಳೆಯ ಮರ ಶವಪೆಟ್ಟಿಗೆಯನ್ನು ಜೋಪಾನವಾಗಿ ಉಳಿಸಿಕೋ. ಮುಂದೆ ನಿನ್ನ ಮಕ್ಕಳು ಇದನ್ನು ಬಳಸಿಕೊಳ್ಳಲು ಬೇಕಾಗುತ್ತದೆ' ಎಂದ.
(ಸಂಗ್ರಹ)
ಮಗನಿಗೆ ತನ್ನ ತಪ್ಪಿನ ಅರಿವಾಯಿತು. ಅಲ್ಲಿಯೇ ತಂದೆಗೆ ಕ್ಷಮೆ ಕೋರಿ ಆತನನ್ನು ಮನೆಗೆ ವಾಪಸ್ ಕರೆತಂದ.












Click it and Unblock the Notifications