Get Updates
Get notified of breaking news, exclusive insights, and must-see stories!

ಶುಭಸಂಕಲ್ಪ : ನಮ್ಮ ಕೆಲಸದಲ್ಲಿ ದೂರದರ್ಶಿತ್ವ

Our work is the presentation of our capabilities
ಭಗವಂತ ಎಲ್ಲರಿಗೂ ಸಮನಾಗಿ ಎಲ್ಲವನ್ನೂ ಕೊಡದಿದ್ದರೂ, ಒಂದು ವಿಷಯದಲ್ಲಿ ಮಾತ್ರ ಸಮಾನತೆಯನ್ನು ತೋರಿದ್ದಾನೆ. ಅದೇನೆಂದರೆ ಎಲ್ಲರಿಗೂ ಕೊಟ್ಟಿರುವ ಸಮಯ. ಎಲ್ಲರಿಗೂ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳು. ನಮಲ್ಲಿ ಅನೇಕರು ದಿನಕ್ಕೆ ಎಂಟರಿಂದ-ಹದಿನಾಲ್ಕು ಗಂಟೆಗಳವರೆಗೆ ಕೆಲಸದಲ್ಲಿ ತೊಡಗಿರುತ್ತಾರೆ. ಆದರೂ ಅವರವರ ಕೆಲಸಕ್ಕೆ ಪ್ರತಿಫಲವಾಗಿ ಬರುವ ಆದಾಯ, ಸವಲತ್ತುಗಳನ್ನು ಗಮನಿಸಿದರೆ ಸಾಕಷ್ಟು ಅಂತರವಿದೆ. ಒಬ್ಬ ಸೆಕ್ಯೂರಿಟಿ ಗಾರ್ಡ್‌ಗೆ, ಅದೇ ಕಂಪನಿಯ ಇಂಜಿನಿಯರ್‌ಗೆ ಮತ್ತು ಕಂಪನಿ ಸಿಇಓಗೆ ಬರುವ ಸಂಬಳದ ವ್ಯತ್ಯಾಸವನ್ನು ಗಮನಿಸಿ. ಅಥವಾ ಒಬ್ಬ ಸೈನಿಕನಿಗೆ ಮತ್ತು ಸೇನಾಧಿಪತಿಗೆ ಸಿಗುವ ಸಂಬಳದಲ್ಲಿ ಇರುವ ಅಗಾಧ ವ್ಯತ್ಯಾಸ ಗಮನಿಸಿ. ಯಾಕೆ ಇಷ್ಟೊಂದು ಅಂತರ? ಒಂದು ಉನ್ನತ ಹುದ್ದೆಯಲ್ಲಿರುವವರ ವೈಶಿಷ್ಟ್ಯವೇನು, ಹೆಚ್ಚುಗಾರಿಕೆಯೇನು? ಎಂದು ನನ್ನಲ್ಲೂ ನಿಮ್ಮಂತೆಯೇ ಮನದಲ್ಲಿ ಈ ಪ್ರಶ್ನೆ ಮೂಡಿದಾಗಲೆಲ್ಲ ನಾನು ಚಿಕ್ಕಂದಿನಲ್ಲಿ ನನ್ನ ತಂದೆಯವರಿಂದ ಕೇಳಿದ ಕತೆಯೊಂದು ನೆನಪಾಗುತ್ತದೆ.

***
ಮಹಾರಾಜರು ಗಂಭಿರವಾಗಿ ಏನೋ ಆಲೋಚಿಸುತ್ತಾ ಅರಮನೆಯ ಕಿಟಕಿಯೊಂದರ ಬಳಿ ನಿಂತಿದ್ದರು. ಸುಂದರವಾದ ಸಂಧ್ಯಾ ಸಮಯದಲ್ಲಿ ಹೊರಗಿನ ದೃಶ್ಯ ನೋಡುತ್ತಿದ್ದಂತೆ ಕಂಡರೂ, ಅವರ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು, ಅವರ ಮನದೊಳಗೆ ಯಾವುದೋ ಗಹನವಾದ ವಿಚಾರದ ಮಂಥನ ನಡೆಯುತ್ತಿತ್ತು. ಅವರ ಆಲೋಚನೆಯ ಸರಣಿಯನ್ನು ತುಂಡರಿಸುವಂತೆ ಕೇಳಿತು ಒಂದು ಧ್ವನಿ.

'ಮಹಾಸ್ವಾಮಿ...'

ಒಂದು ಕ್ಷಣ ಅಯೋಮಯವಾಗಿ, ತಕ್ಷಣ ಲೌಕಿಕಕ್ಕೆ ಮರಳಿದರು. ಧ್ವನಿ ಕೇಳಿ ತಿರುಗಿದರೆ, ಅರಮನೆಯ ಹಿರಿಯ ಕಾವಲುಗಾರ ರಾಮಯ್ಯ ನಿಂತಿದ್ದ.

'ಮಹಾಸ್ವಾಮಿಗಳು ಕ್ಷಮಿಸಬೇಕು... ತಮ್ಮಲ್ಲಿ ನನ್ನದೊಂದು ವಿನಂತಿಯಿದೆ... ತಾವು ತಪ್ಪು ತಿಳಿಯದೆ ಹೋದರೆ... ಅಪ್ಪಣೆ ಕೊಟ್ಟರೆ ನನ್ನದೊಂದು ಪ್ರಶ್ನೆಯಿದೆ ಮಹಾಸ್ವಾಮಿ?'

ಮಹಾರಾಜರು ಸಹನಾಶೀಲರು, ಕರುಣಾಮಯಿಗಳು, ಆಡಳಿತದಲ್ಲಿ ಚಾಣಕ್ಷರು ಮತ್ತು ಮುಖ್ಯವಾಗಿ ಪ್ರಜೆಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತಿದ್ದರು. ಮನದಲ್ಲಿ ಏನೇ ರಾಜ್ಯ ಆಡಳಿತದ ಅಗ್ನಿ ಪರ್ವತವಿದ್ದರು, ಪ್ರಜೆಗಳೊಂದಿಗೆ ಮತ್ತು ಆಡಳಿತ ವರ್ಗದೊಂದಿಗೆ ಸಹನೆಯಿಂದ, ಪ್ರೀತಿಯಿಂದ ವರ್ತಿಸುತಿದ್ದರು. ರಾಮಯ್ಯ ಸುಮಾರು ಅವರದೇ ವಯಸ್ಸಿನವ ಮತ್ತು ಅರಮನೆಯ ತುಂಬಾ ಹಳೆಯ ಕಾವಲುಗಾರ. ರಾಮಯ್ಯನ ಮಾತನ್ನು ಅಡಚಣೆ ಎಂದು ಭಾವಿಸದೆ, ಮಂದಹಾಸದಿಂದ ಹೇಳಿದರು :

'ಹೇಳು ರಾಮಯ್ಯ, ಏನೋ ನಿನ್ನ ಪ್ರಶ್ನೆ?'

'ತೊಂದರೆಯಾಯಿತೇನೋ ಮಹಾಸ್ವಾಮಿಯವರಿಗೆ?' ವಿನಯದಿಂದ ತಲೆತಗ್ಗಿಸಿ ನುಡಿದ ರಾಮಯ್ಯ.

ಸಂಕೋಚದಿಂದ ಮುದುಡಿದ್ದ ರಾಮಯ್ಯನನ್ನು ಪ್ರೋತ್ಸಾಹಿಸುವಂತೆ ಮಹಾರಾಜರು ನುಡಿದರು, 'ಪ್ರಜೆಗಳ ಮತ್ತು ಆಡಳಿತ ವರ್ಗದವರ ಪ್ರಶ್ನೆಗಳಿಗೆ ಉತ್ತರಿಸುವುದು ನಮ್ಮ ಕರ್ತವ್ಯ. ನಮಗೆ, ಅರಮನೆಗೆ ನೀನೇನು ಹೊಸಬನಲ್ಲ... ಪ್ರಶ್ನೆ ಯಾವುದೇ ಇರಲಿ... ಧೈರ್ಯದಿಂದ ಕೇಳು ರಾಮಯ್ಯ.'

ಮಹಾಸ್ವಾಮಿಯವರ ಮೃದು ನುಡಿ ಕೇಳಿ ಕೊಂಚ ಧೈರ್ಯ ಬಂದಂತಾಗಿ ಕಾವಲುಗಾರ ರಾಮಯ್ಯ ನುಡಿದ 'ಮಹಾಸ್ವಾಮಿ, ನೀವೇ ನೋಡಿದಂತೆ ನಾನು ನಿಷ್ಠೆಯಿಂದ ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡುತ್ತೇನೆ. ಕರ್ತವ್ಯದಲ್ಲಿ ಎಂದು ಲೋಪವಾಗಿಲ್ಲ ಮತ್ತು ಯಾವುದೇ ಆರೋಪವಿಲ್ಲ. ಮಹಾಮಂತ್ರಿಗಳು ಸಹ ನನ್ನ ಹಾಗೆಯೇ ದಿನಕ್ಕೆ ಹನ್ನೆರಡು ಗಂಟೆ ಶ್ರಮಿಸುತ್ತಾರೆ. ಆದರೆ ನನಗೆ ಸಿಗುವ ಸಂಬಳ, ಸವಲತ್ತಿಗೂ ಅವರಿಗೆ ಸಿಗುವ ಸಂಬಳ, ಸವಲತ್ತಿಗೂ ಅಜಗಜಾಂತರವಿದೆ. ಯಾಕೆ ಸ್ವಾಮೀ, ವಯಸ್ಸು, ಅನುಭವ ಮತ್ತು ಸೇವೆಯ ಅವಧಿ ಹೆಚ್ಚು ಕಮ್ಮಿ ಒಂದೇ ಆಗಿದೆ. ಯಾಕೀ ಮಹಾದಾಂತರ ಮಹಾಸ್ವಾಮಿ? ಯಾಕೋ ನನ್ನ ಮತಿಗೆ ಉತ್ತರ ತೋಚುತ್ತಿಲ್ಲ. ಮಹಾಸ್ವಾಮಿಗಳು ದಯವಿಟ್ಟು ಪರಾಂಬರಿಸಬೇಕು. ನನ್ನ ಪ್ರಶ್ನೆಯು ಉದ್ಧಟತನವೆನಿಸಿದರೆ ಕರುಣೆ ತೋರಿ ಕ್ಷಮಿಸಬೇಕು.' ಯಾಕೋ ಇಷ್ಟು ನುಡಿಯುವಷ್ಟರಲ್ಲಿ ರಾಮಯ್ಯನ ಕಣ್ಣಲ್ಲಿ ಕೊಂಚ ಕಣ್ಣೀರು ತುಳುಕಿತ್ತು.

ಮಹಾರಾಜರಿಗೆ ಪ್ರಶ್ನೆ ಕೇಳಿ ಸ್ವಲ್ಪವು ಅಸಮಾಧಾನವಾಗಲಿಲ್ಲ. ಪ್ರಶ್ನೆಯನ್ನು ಗಮನವಿಟ್ಟು ಕೇಳಿಸಿಕೊಂಡರು. ಪ್ರಶ್ನೆ ಕೇಳುವುದು ಅದಕ್ಕೆ ಉತ್ತರ ಹೇಳಿ ಅನುಮಾನ ಪರಿಹರಿಸುವುದು ಮಹಾರಾಜರಿಗೆ ಹೊಸದೇನಲ್ಲ. ಆದರೆ ಈ ಪ್ರಶ್ನೆಗೆ ಕೇವಲ ತಾರ್ಕಿಕ ಉತ್ತರದಿಂದ ರಾಮಯ್ಯನ ಅನುಮಾನ, ಅಸಮಾಧಾನ ಪರಿಹಾರವಾಗುವುದಿಲ್ಲ ಎಂದೆನಿಸುತ್ತಿತ್ತು. ಹಾಗೆ ಯೋಚಿಸುತ್ತಾ ಕಿಟಿಕಿಯ ಕಡೆ ತಿರುಗಿದಾಗ, ದೂರದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವ ಹೆದ್ದಾರಿಯ ಬದಿಯಲ್ಲಿ ಬಿಡಾರ ಹೂಡಿದ್ದ ವ್ಯಾಪಾರಿಗಳ ಗುಂಪು ಕಾಣುತಿತ್ತು. ಯಾವುದೋ ದವಸ ಧಾನ್ಯಗಳನ್ನು ಹೊತ್ತು ಒಂದು ಊರಿನಿಂದ ಮತ್ತೊಂದು ಕಡೆ ಹೋಗಿ ವ್ಯಾಪಾರ ಮಾಡುವ ಗುಂಪಿನಂತೆ ಕಾಣುತ್ತಿದ್ದರು.

'ರಾಮಯ್ಯ ನಿನ್ನ ಪ್ರಶ್ನೆಗೆ ಉತ್ತರಿಸುವೆ. ಅದಕ್ಕೂ ಮೊದಲು ನೀನು ಆ ಹೆದ್ದಾರಿಯ ಬದಿಯಲ್ಲಿ ಬಿಡಾರ ಹೂಡಿರುವವರು ಯಾರು? ಎಲ್ಲಿಗೆ ಹೋಗುತ್ತಿದ್ದಾರೆ ಎಂದು ತಿಳಿದು ಬಾ. ನಾವು ಇಲ್ಲೇ ಕಾಯುತ್ತಿರುತ್ತೇವೆ' ಎಂದರು.

'ಅಪ್ಪಣೆ ಮಹಾಸ್ವಾಮಿ...' ಎಂದವನೇ ತಟ್ಟನೆ ಹೊರಟ ರಾಮಯ್ಯ. ಕೆಲ ಸಮಯದ ನಂತರ ಹಿಂದಿರುಗಿದ ರಾಮಯ್ಯ 'ಮಹಾಸ್ವಾಮಿ, ಆ ವ್ಯಾಪಾರಿಗಳು ಪಕ್ಕದ ರಾಜ್ಯದ ಚಂದ್ರಪುರಕ್ಕೆ ಹೋಗುತ್ತಿದ್ದಾರೆ' ಎಂದ.

'ಹೌದೇನು? ಏಕೆ ಹೋಗುತ್ತಿದ್ದಾರೆ?' ಎಂದರು ಮಹಾರಾಜರು. 'ತಿಳಿಯದು ಮಹಾಸ್ವಾಮಿ? ಹೋಗಿ ವಿಚಾರಿಸಿ ಕೊಂಡು ಬರಲೇ?' 'ಅಗತ್ಯವಾಗಿ...' ಎಂದರು ಮಹಾರಾಜರು. ಮತ್ತೆ ಕೆಲ ಸಮಯದ ನಂತರ ಮರಳಿದ ರಾಮಯ್ಯ 'ಮಹಾಸ್ವಾಮಿ ತಮ್ಮ ದವಸ ಧಾನ್ಯ, ಮುಖ್ಯವಾಗಿ ಅಕ್ಕಿ ಮತ್ತು ರಾಗಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ' ವಿನಯದಿಂದ ಹೇಳಿದ ರಾಮಯ್ಯ.

'ಯಾವ ಬೆಲೆಗೆ ಮಾರುತ್ತಾರಂತೆ?' 'ಅಕ್ಕಿಯ ಬೆಲೆ ಏನಂತೆ?' ಹೀಗೆ ಮಹಾರಾಜರು ಒಂದರ ನಂತರ ಒಂದು ಪ್ರಶ್ನೆ ಕೇಳುತ್ತಿದ್ದರೆ, ರಾಮಯ್ಯ ವ್ಯಾಪಾರಿಗಳ ಬಳಿ ಹಲವು ಬಾರಿ ಹೋಗಿ ಉತ್ತರ ಮತ್ತು ಮಾಹಿತಿ ಕೇಳಿಕೊಂಡು ಬರುತ್ತಿದ್ದ. ಕೊನೆಗೆ ಸುಸ್ತಾಗಿ ಹೋದ. ಅದ ಕಂಡು ಮಹಾರಾಜರು 'ರಾಮಯ್ಯ ನೀನಿನ್ನೂ ಮನೆಗೆ ಹೊರಡು... ನಾಳೆ ಬೆಳಿಗ್ಗೆ ಮತ್ತೆ ನಮ್ಮನ್ನು ಕಾಣು' ಎಂದು ಅಪ್ಪಣೆ ಕೊಟ್ಟರು. ಏನೆಂದರೆ ಏನೂ ಅರ್ಥವಾಗದೆ ತನ್ನ ಪ್ರಶ್ನೆಯೊಂದಿಗೆ ಮನೆಗೆ ಹೋದ ರಾಮಯ್ಯ. ಮಹಾರಾಜರು ನನ್ನ ಪ್ರಶ್ನೆ ಕೇಳಿ ಎಲ್ಲಿ ತಪ್ಪು ತಿಳಿದರೋ ಎಂಬ ಅಳುಕಿನೊಂದಿಗೆ ಆ ರಾತ್ರಿ ಮಲಗಿದ.

ಬೆಳಿಗ್ಗೆ ರಾಮಯ್ಯ ಮಹಾರಾಜರನ್ನು ಕಾಣಲು ಬರುವ ಹೊತ್ತಿಗೆ ಸರಿಯಾಗಿ, ಮಹಾಮಂತ್ರಿಗಳು ಬಂದರು. ರಾಮಯ್ಯನನ್ನು ಕಣ್ಣ ಸನ್ನೆಯಲ್ಲೇ ಕಾಯುವಂತೆ ಹೇಳಿ, ಮಹಾಮಂತ್ರಿಗಳಿಂದ ಕುಶಲೋಪರಿ ಮಾತಾಡಿ ನಂತರ 'ಮಹಾಮಂತ್ರಿಗಳೇ ಆ ಹೆದ್ದಾರಿಯ ಬಳಿ ಒಂದು ವ್ಯಾಪಾರಿಗಳ ಗುಂಪೊಂದು ಬೀಡು ಬಿಟ್ಟಿದೆ ಏನೆಂದು ವಿಚಾರಿಸಿಕೊಂಡು ಬನ್ನಿ' ಎಂದರು.

ರಾಮಯ್ಯನಿಗೆ ಅಚ್ಚರಿಯಾದರೂ ಮಹಾರಾಜ ಮನದಲ್ಲಿ ಏನಿದೆ? ಎಂದು ಅರಿಯದೆ ಗೊಂದಲಕ್ಕೆ ಬಿದ್ದ. ನಂತರ ಮಹಾರಾಜರು ಯಾವುದೋ ಗ್ರಂಥದಲ್ಲಿ ಮುಳುಗಿ ಹೋದರು. ರಾಮಯ್ಯ ಅವರ ಅಪ್ಪಣೆಗೆ ಕಾಯುತ್ತ ಅಲ್ಲೇ ಕಾವಲು ನಿಂತಿದ್ದ.

ಕೆಲ ಸಮಯದ ನಂತರ ಮರಳಿದ ಮಹಾಮಂತ್ರಿಗಳು ಮಹಾರಾಜರಿಗೆ 'ಮಹಾಸ್ವಾಮಿ, ಅಲ್ಲಿ ಬಿಡಾರ ಬಿಟ್ಟಿರುವವರು ರಾಜಗಿರಿಯ ವ್ಯಾಪಾರಿಗಳು. ದವಸ ಧಾನ್ಯಗಳನ್ನು, ಮುಖ್ಯವಾಗಿ ಅಕ್ಕಿ ಮತ್ತು ರಾಗಿ ತೆಗೆದುಕೊಂಡು ಚಂದ್ರಪುರಕ್ಕೆ ಹೋಗುತ್ತಿದ್ದಾರೆ. ರಾಜಗಿರಿಯಲ್ಲಿ ಈ ವರ್ಷ ಒಳ್ಳೆ ಮಳೆಯಾಗಿ ಒಳ್ಳೆ ಫಸಲು ಬಂದಿದೆ. ನಿಮಗೆ ಗೊತ್ತಿರುವಂತೆ ನಮ್ಮ ರಾಜ್ಯದಲ್ಲಿ ಬರಗಾಲದಿಂದ ದವಸ ಧಾನ್ಯಗಳ ಕೊರತೆಯಿದೆ. ಹಾಗಾಗಿ ಅವರಿಗೆ ನಮ್ಮಲ್ಲೇ ವ್ಯಾಪಾರ ಮಾಡಲು ಕೇಳಿಕೊಂಡಿದ್ದೇನೆ. ಹಾಗೆ ಅವರಿಗೆ ಚಂದ್ರಪುರದವರೆಗೆ ಹೋಗುವ ಶ್ರಮ ಕಮ್ಮಿಯಾಗುವುದರಿಂದ ಕೊಂಚ ಬೆಲೆ ತಗ್ಗಿಸಲು ಕೇಳಿಕೊಂಡೆ, ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನೀವು ಅಪ್ಪಣೆ ಕೊಟ್ಟರೆ ಅವರಿಗೆ ರಾಜ್ಯ ಪ್ರವೇಶಿಸಲು ಮತ್ತು ವ್ಯಾಪಾರ ಮಾಡಲು ಅನುಮತಿ ನೀಡುತ್ತೇನೆ' ಎಂದು ಸಂಪೂರ್ಣ ವರದಿ ಕೊಟ್ಟ.

ಮಹಾರಾಜರು ಪ್ರಸನ್ನರಾಗಿ 'ಅಗತ್ಯವಾಗಿ ಮಹಾಮಂತ್ರಿಗಳೇ, ಮುಂದುವರೆಯಿರಿ' ಎಂದರು. ಮಹಾಮಂತ್ರಿಗಳು ನಿರ್ಗಮಿಸಿದ ನಂತರ ರಾಮಯ್ಯನ ಕಡೆ ತಿರುಗಿ 'ರಾಮಯ್ಯ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿತೆ?' ಎಂದು ಮಾರ್ಮಿಕವಾಗಿ ನಕ್ಕರು.

ರಾಮಯ್ಯ ಅರ್ಧ ನಾಚಿಕೆಯಿಂದ ಮತ್ತು ಅರ್ಧ ಸಂಕೋಚದಿಂದ, ಉತ್ತರ ಸಿಕ್ಕಿತು ಎಂಬಂತೆ ತಲೆಯಾಡಿಸಿದ. ಅವನ ಮುಖ ಹೊಸ ತಿಳಿವಳಿಕೆಯಿಂದ ಬಂದ ಕಾಂತಿಯೊಂದಿಗೆ ಬೆಳಗುತಿತ್ತು. ನಂತರದ ದಿನಗಳಲ್ಲಿ ರಾಮಯ್ಯ ತನ್ನ ಕೆಲಸದಲ್ಲಿ ಬಹುಬೇಗ ಪ್ರಗತಿ ಹೊಂದಿದ.

***
ಈ ಕತೆ ನೆನಪಾದಾಗಲೆಲ್ಲ, ಪ್ರತಿ ಪುಟ್ಟ ಕೆಲಸದಲ್ಲಿಯೂ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಯಾವ ಕೆಲಸವೂ ಚಿಕ್ಕದಲ್ಲ, ನಿಕೃಷ್ಟವಲ್ಲ, ಕೆಲಸ ಮಾಡುವವರ ಮನೋಭಾವ ಆ ಕೆಲಸವನ್ನು ಚಿಕ್ಕದಾಗಿಸುತ್ತದೆ ಎಂಬ ಮಾತನ್ನು ನೆನಪಿಸಿಕೊಳ್ಳುತ್ತೇನೆ. ಉದಾಹರಣೆಗೆ ನಾವು ಹೊಸ ಕಟ್ಟಡಕ್ಕೆ ಇಟ್ಟಿಗೆ ಜೋಡಿಸುವ ಕೆಲಸವನ್ನು ಕೂಡ ಈ ಹೊಸ ರೀತಿ ನೋಡಬಹುದು, ನಾನು ಕೇವಲ ಇಟ್ಟಿಗೆ ಜೋಡಿಸುತ್ತಿಲ್ಲ, ಮುಂದಿನ ಪೀಳಿಗೆಗಾಗಿ ಸೌಧ ಕಟ್ಟುತಿದ್ದೇನೆ ಎಂದು. ಹಾಗೆಯೇ ನಮ್ಮಲ್ಲಿ, ನಮ್ಮ ಕೆಲಸದಲ್ಲಿ ದೂರದರ್ಶಿತ್ವ ರೂಢಿಸಿಕೊಳ್ಳುವ 'ಶುಭಸಂಕಲ್ಪ' ಮಾಡೋಣ.[ಲೇಖಕರ ಈಮೇಲ್ : [email protected]]

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+