ಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ
ಆಷಾಢದ ಗಾಳಿಯೇ?
ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.
ಸಿಂಹಾಸನ ಉರುಳಿದಾಗ
ಶ್ರಾವಣ ಎಂದೂ
ದೇವಾಲಯ ನಡುಗಿದಾಗ
ಮಾರ್ಗಶಿರ ಎಂದೂ
ಕವಿತೆಯನ್ನೂ ಎಂದೂ ಓದದ
ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ
ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.
ಮೊನ್ನೆ ಮಳೆಗಾಲದಲ್ಲಿ
ನಮ್ಮೂರ ಗುಡಿಯ
ಗರುಡಗಂಭಕ್ಕೆ ಸಿಡಿಲು ಬಡಿಯಿತು.
ಒಣ ಮರದ ಕಂಬ ಅಲ್ಲಾಡಲಿಲ್ಲ.
ದೇವರುಗಳ ರಾಜ್ಯದಲ್ಲಿ
ತಿರುಕರೇ ಎಲ್ಲಾ.
ಇದ್ದವರೂ ಬೇಡುವರು, ಇಲ್ಲದವರೂ.
ಇದ್ದವರಿಗೆ ದೇವರು ನೀಡುವರು.
ಇಲ್ಲದವರು ನಾಳೆಗಾಗಿ ಕಾಯುವರು.
ಭತ್ತವೊಂದು ಬಿತ್ತವಾಗಿ
ಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿ
ಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವ
ಪವಾಡಕ್ಕೆ ನಾವು ಕಾಯುತ್ತಾ ಕೂತೆವು.
ದೇವರ ಮುಂದಿಟ್ಟ ನೈವೇದ್ಯಕ್ಕೆ
ಒಂದು ದಳ ಶ್ರೀತುಲಸಿ
ಬಿಂದು ಗಂಗೋದಕ ಸಾಕು
ಪರಮಾತ್ಮನ ಮುಟ್ಟುವುದಕ್ಕೆ.
ಹೊರಗಡೆ ಬೀಸುತ್ತಿರುವುದು
ಆಷಾಢದ ಗಾಳಿಯೇ.
ಎಂದೂ ಕವಿತೆಯನ್ನೇ ಓದದ
ಶ್ರೀಮಂತರು ಸುಖವಾಗಿದ್ದಾರೆ.
ಕವಿತೆಯೆಂದರೆ ಏನೆಂದು ಅರಿಯದ
ಬಡವನೂ ಸುಖಿ.
ಕವಿತೆ ಹೆಣ್ಣು, ಪೃಥಿವಿ, ಆಕಾಶ, ಸೂರ್ಯ
ಹೋರಾಟ, ಕೆಂಡದ ಮಳೆ, ಗಾಢಪ್ರೇಮ
ಅವ್ವನ ಹಣೆಯ ಸುಕ್ಕು,
ತಂಗಿ ಕಳಕೊಂಡ ಯೌವನ,
ಸಿರಿಯಜ್ಜಿನ ಕಂಠ, ತಿಮ್ಮಕ್ಕನ ಸಾಲುಮರ
ಎಂದುಕೊಂಡು
ಹಗಲು ಬೆಳಕಾರುತ್ತಿದೆ.
ಹೊರಗೆ ಬೀಸಿದ್ದು
ಆಷಾಢದ
ಗಾಳಿಯೇ!