ದೇಹ ಮತ್ತು ಆತ್ಮ
- ಪ್ರತಿಭಾ ನಂದಕುಮಾರ್
ದೇಹ
ಕತೆಗೆ ಕಾಲಿಲ್ಲ ಎನ್ನುತ್ತಾರೆ
ಅಕಸ್ಮಾತ್ ಪಾದ ತಗುಲಿ ಪ್ರಾರಂಭವಾದ ಕತೆ
ಜಗುಲಿಯಲ್ಲೇ ಏಳು ಲೋಕ ಸುತ್ತಿ ಬಂದು
ಹೊರಳಿ ನೋಡಿದರೆ
ಜಂಬೂ ದ್ವೀಪೇ ಭರತ ಖಂಡೇ...
ಪೀಠಿಕಾ ಪ್ರಕರಣವೇ ಎಷ್ಟು ಉದ್ದ .
ಯಾರದೋ ಕಾಲು ತಗುಲಿ
ಯಾರಿಗೋ ಶಾಪ ವಿಮೋಚನೆಯಂತೆ
ಬಂಡೆಯಾದವಳು ಜೀವ ತಳೆದು
ಎದ್ದು ಕೂತಳಂತೆ
ಅಂದಿನಿಂದಲೇ ಪಾದ ಪೂಜೆ, ಪದಕಮಲ,
ಪಾದೋಪಚಾರ, ಪಾದಾರ್ಪಣೆ, ಪದತಲ
ಎನ್ನುವ ಪದಗಳೆಲ್ಲ ಹುಟ್ಟಿಕೊಂಡವು
ಮತ್ತು
ಅವರು ಏಕಪತ್ನೀವ್ರತಸ್ಥರೆಂದು
ಯಾರೋ ಹೆದರಿಸಿದ್ದರು.
ಇರಲಿ ಬಿಡ್ರಯ್ಯ
ನಾನೇನು ಬಹುಪತ್ನಿಗಳನ್ನು ಬಯಸಿದೆನೇ
ಎಂದು ಗದರಿದ್ದೆ.
ಈ ರಾತ್ರಿ ಇಲ್ಲಿ ಹೀಗೆ
ಮಿಂಚು ಹುಳುಗಳು ಹಾರಾಡುವಾಗ
ಈ ಜಗುಲಿ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ .
ಬೆಳಗ್ಗೆ ಬಾಯನ್ನೂ ಬಿಡುವುದಿಲ್ಲ .
ಆತ್ಮ
ಆದರೆ ನಾವು ಹಾಗೆ ಪರಸ್ಪರ ಬೆನ್ನು ತಿರುಗಿಸಿ
ಹೊರಟು ನಿಂತಿದ್ದು ಮಾತ್ರ
ನಿಸರ್ಗನಿಯಮವಲ್ಲ .











Click it and Unblock the Notifications