ಕಾಡುಕುದುರೆಯೇರಿ ಬಂದ ಧೀರ ಶಿವಮೊಗ್ಗ ಸುಬ್ಬಣ್ಣ
1979ರಲ್ಲಿ ಕಾಡು ಕುದುರೆ ಚಿತ್ರದ ಕಾಡು ಕುದುರೆ ಓಡಿ ಬಂದಿತ್ತಾ... ಗೀತೆಯ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಶಿವಮೊಗ್ಗ ಸುಬ್ಬಣ್ಣ ವೃತ್ತಿಯಲ್ಲಿ ವಕೀಲರಾದರೂ, ಪ್ರವೃತ್ತಿಯಲ್ಲಿ ಗಾಯಕರು. ಸುಗಮ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಸುಬ್ಬಣ್ಣ ಅವರು, ದಕ್ಷಿಣ ಕನ್ನಡ ಜಿಲ್ಲೆಯ ನೀಲಾವರ ಅಡಿಗ ಮನೆತನಕ್ಕೆ ಸೇರಿದವರಾದರೂ, ಶಿವಮೊಗ್ಗದಲ್ಲಿ ನೆಲೆಸಿ ಶಿವಮೊಗ್ಗ ಸುಬ್ಬಣ್ಣ ಎಂದೇ ಹೆಸರಾದರು.
ನೋಟರಿಯಾಗಿ, 9 ವರ್ಷಗಳ ಕಾಲ ಕರ್ನಾಟ ಉಚ್ಚ ನ್ಯಾಯಾಲಯದಲ್ಲಿ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿರುವ ಸುಬ್ಬಣ್ಣ ಅವರು, ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಭಾವಗೀತೆಯನ್ನು ಹಾಡುವ ಶೈಲಿಯೇ ವಿಶಿಷ್ಟ. ವಕೀಲೀ ವೃತ್ತಿಯ ಜತೆ ಜತೆಗೇ ಗಾನ ಸರಸ್ವತಿಯನ್ನು ಆರಾಧಿಸಿದ ಸುಬ್ಬಣ್ಣನವರಿಗೆ ಲಕ್ಷ್ಮೀ, ಸರಸ್ವತಿ ಇಬ್ಬರೂ ಒಲಿದಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಕಾಳಿಂಗರಾವ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಪ್ರಶಸ್ತಿ ಗಳಿಸಿರುವ ಸುಬ್ಬಣ್ಣನವರನ್ನು ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಈ ಬಾರಿ ಭಾರ್ಗವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಸಂಗೀತ ಕ್ಷೇತ್ರಕ್ಕೆ ಸುಬ್ಬಣ್ಣನವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಸಂತ ಶಿಶುನಾಳ ಶರೀಫ್ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ಆಕಾಶವಾಣಿಯಲ್ಲಿ ಎ ಶ್ರೇಣಿಯ ಗಾಯಕರಾಗಿರುವ ಸುಬ್ಬಣ್ಣ ಕರ್ನಾಟಕ ಸಂಗೀತ ಅಕಾಡಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸುಬ್ಬಣ್ಣನವರ ಮನೆಯಲ್ಲಿ ಇಂದಿಗೂ ವಾರಕ್ಕೊಮ್ಮೆ ಗಾಯನ ಗೋಷ್ಠಿ ನಡೆಯುತ್ತಲೇ ಇರುತ್ತದೆ.